ನಂಜನಗೂಡು: ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ ಕ್ಷೇತ್ರದ ಮತದಾರರು ಈ ಬಾರಿಯೂ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡಿ ಸಿದ್ದರಾಮಯ್ಯ ಕೈಬಲಪಡಿಸಬೇಕು ಎಂದು ಸಂಸದ ಆರ್. ಧ್ರುವನಾರಾಯಣ ಕೋರಿದರು.
ತಾಲ್ಲೂಕಿನ ಮಹದೇವ ನಗರದಲ್ಲಿ ಭಾನುವಾರ ಬದನವಾಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀನಿವಾಸ್ ಪ್ರಸಾದ್ 5 ಬಾರಿ ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆಯಾಗಿದ್ದಾರೆ. ಅವರು ಕಾಂಗ್ರೆಸ್ ತೊರೆಯುವ ನಿರ್ಧಾರ ಮಾಡಿದಾಗ ಪಕ್ಷ ತ್ಯಜಿಸದಂತೆ ನಾನು ಕೋರಿದ್ದೆ. ಬೇರೆ ಪಕ್ಷಕ್ಕೆ ಹೋಗಿ ಚುನಾವಣೆಯಲ್ಲಿ ಸೋತರು ಎಂದರು.
ಕಾಂಗ್ರೆಸ್ ಪಕ್ಷ ಎಲ್ಲ ವರ್ಗಕ್ಕೂ ಸಾಮಾಜಿಕ ನ್ಯಾಯ ನೀಡಲಿದೆ. ಅದೇ ಕಾರಣಕ್ಕೆ ಉಪ ಚುನಾವಣೆಯಲ್ಲಿ ಕೇಶವಮೂರ್ತಿಯನ್ನು ಗೆಲ್ಲಿಸಿದರು. ಶಾಸಕ ಕೇಶವ ಮೂರ್ತಿ ದೊರೆತ ಅಲ್ಪ ಅವಧಿಯಲ್ಲಿ ಪ್ರತಿ ಗ್ರಾಮಗಳಿಗೆ ಭೇಟಿ ಕೊಟ್ಟು ಜನರಿಗೆ ಸ್ಪಂದಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.
ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು, ‘ಬಿಜೆಪಿಯ ಆಂತರಿಕ ಪರಿಸ್ಥಿತಿ ಸರಿಯಿಲ್ಲ, ಸಂವಿಧಾನ ಬದಲಿಸುವ ಆ ಪಕ್ಷದ ಕೇಂದ್ರ ಸಚಿವರ ಹೇಳಿಕೆ ಖಂಡಿಸಿ ಪಕ್ಷ ತ್ಯಜಿಸಿದೆ’. ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ಗೆ ಬರುವಂತೆ ಆಹ್ವಾನ ನೀಡಿದರು. ಸಂಸದ ಧ್ರುವನಾರಾಯಣ ಸಮ್ಮತಿಸಿದರು. ಹೀಗಾಗಿ ಕಾಂಗ್ರೆಸ್ ಸೇರಿದ್ದೇನೆ. ಕಾಂಗ್ರೆಸ್ ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಬಲಪಡಿಸಿ’ ಎಂದರು.
ಶಾಸಕ ಕೇಶವಮೂರ್ತಿ, ’ಮತ್ತೆ ಆಯ್ಕೆ ಮಾಡಿ, 5 ವರ್ಷಗಳ ಪೂರ್ಣಾವಧಿ ಅಧಿಕಾರ ನೀಡಿ ಜನರ ಸೇವೆಗೆ ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು. ಹೆಡತಲೆ, ಹೆಮ್ಮರಗಾಲ,ಕೂಡ್ಲಾಪುರ ಭಾಗದ ಹಲವರು ಕಾಂಗ್ರೆಸ್ ಸೇರಿದರು.
ಜಿ.ಪಂ. ಸದಸ್ಯೆ ಲತಾ ಸಿದ್ದಶೆಟ್ಟಿ, ಎಪಿಎಂಸಿ ಅಧ್ಯಕ್ಷ ಮಾದಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಉಪಾಧ್ಯಕ್ಷ ವಿಜಯಕುಮಾರ್, ತಾ.ಪಂ, ಸದಸ್ಯರಾದ ಮಹೇಂದ್ರ, ಎಚ್.ಎಸ್.ಮೂಗಶಟ್ಟಿ, ಮುಖಂಡರಾದ ತಮ್ಮಣ್ಣೇಗೌಡ, ಡಿ.ಎಂ.ರಾಜು, ದೊರೆಸ್ವಾಮಿ ನಾಯಕ, ಎಂ.ಶ್ರೀಧರ್, ಜಗದೀಶ್, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀ, ನಗರಸಭೆ ಸದಸ್ಯ ಸಿ.ಎಂ ಶಂಕರ್, ಗ್ರಾ.ಪಂ.ಸದಸ್ಯ ರಂಗದಾಸ್, ಚಿನ್ನದಗುಡಿಹುಂಡಿ ಕುಳ್ಳಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.