ಹುಣಸೂರು: ತಾಲ್ಲೂಕಿನ 5 ಪಂಚಾಯಿತಿ ವ್ಯಾಪ್ತಿಯ 50 ಕೆರೆಗಳಿಗೆ ಲಕ್ಷ್ಮಣತೀರ್ಥ ನದಿಯಿಂದ ನೀರು ತುಂಬಿಸುವ ಯೋಜನೆಗೆ ಕಾವೇರಿ ನೀರಾವರಿ ನಿಗಮ ಉನ್ನತ ಸಮಿತಿ ಅನುಮೋದನೆ ನೀಡಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲಕ್ಷ್ಮಣತೀರ್ಥ ನದಿಯಿಂದ ಮರದೂರು ಗ್ರಾಮದಲ್ಲಿ ಏತ ನೀರಾವರಿ ಮೂಲಕ ₹65 ಕೋಟಿ ವೆಚ್ಚದಲ್ಲಿ 5 ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆರೆಗ ಳಿಗೆ ಮಳೆಗಾಲದಲ್ಲಿ ನೀರು ತುಂಬಿಸುವ ಯೋಜನೆಗೆ ಅನುಮೋದನೆ ಸಿಕ್ಕಿದ್ದು ಇದರಿಂದ 25 ಗ್ರಾಮಗಳಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.
ಮರದೂರು ಏತ ನೀರಾವರಿ ಸ್ಥಳದಲ್ಲಿ 7 ಕೊಳವೆಗಳಿಗೆ ಯಂತ್ರ ಅಳವಡಿಸಿ ಗುರುತ್ವಾಕರ್ಷಣೆ ತಂತ್ರ ಜ್ಞಾನದ ಮೂಲಕ ಕೆರೆಗಳಿಗೆ ನೀರು ಹರಿ ಸಲು ಈಗಾಗಲೇ ಸರ್ವೆ ಕಾರ್ಯ ನಡೆಸ ಲಾಗಿದೆ. ಈ ಯೋಜನೆಯಲ್ಲಿ ತಾಲ್ಲೂಕಿನ 48 ಕೆರೆ ಹಾಗೂ ಎಚ್.ಡಿ.ಕೋಟೆ ತಾಲ್ಲೂಕಿಗೆ ಸೇರಿದ 2 ಕೆರೆಗಳಿಗೆ ಮರದೂರು ಏತದಿಂದ ನೀರು ತುಂಬಿಸಲಾಗುವುದು.
ಈ ಯೋಜನೆಯಲ್ಲಿ ತಾಲ್ಲೂಕಿನ 50 ಕೆರೆಗಳಿಗೆ ಒಟ್ಟು 0.235 ಟಿಎಂಸಿ ಅಡಿ (31 ಕ್ಯೂಸೆಕ್) ನೀರು ಸಂಗ್ರಹಿಸ ಬಹುದಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಅಂತರ್ಜಲ ಉತ್ತಮಗೊಳ್ಳು ವುದರಿಂದ ಕೊಳವೆ ಬಾವಿಗಳಿಗೆ ಮರು ಜೀವನ ನೀಡಿದಂತಾಗಲಿದೆ ಎಂದು ತಿಳಿಸಿದ್ದಾರೆ.
ಸಣ್ಣ ನೀರಾವರಿ : ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಯೋಜನೆಯಲ್ಲಿ 2016–17ನೇ ಸಾಲಿಗೆ ₹3.50 ಕೋಟಿ ಮಂಜೂರಾಗಿದ್ದು ಈ ಅನುದಾನದಲ್ಲಿ ಲಕ್ಷ್ಮಣತೀರ್ಥ ನದಿ ಏತನೀರಾವರಿ ಯೋಜನೆ ಮೂಲಕ ಬೋಳನಹಳ್ಳಿ ಕೆರೆ, ಚೋಳನಹಳ್ಳಿ ಕೆರೆ ಮತ್ತು ಮೈದನಹಳ್ಳಿ ಕೆರೆಗಳಿಗೆ ನೀರು ತುಂಬಿಸಿವ ಯೋಜನೆ ಕೈಗೆತ್ತುಕೊಂಡಿದ್ದು, ಈ ಯೋಜನೆಯಲ್ಲಿ 350 ಹೆಕ್ಟೇರ್ ಪ್ರದೇಶ ಅಚ್ಚುಕಟ್ಟಾಗಿ ಪರಿವರ್ತನೆ ಆಗಲಿದೆ.
ವಿಶೇಷ ಘಟಕ ಯೋಜನೆ ಅಡಿಯಲ್ಲಿ ₹3.50 ಕೋಟಿ ಮಂಜೂರಾ ಗಿದ್ದು, ಈ ಅನುದಾನದಲ್ಲಿ ಕೊಳಗಟ್ಟ ಹೊಸಕೆರೆ ಸೇರಿದಂತೆ ಮೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ನಡೆಯಲಿದೆ. ಇದಲ್ಲದೆ ಗಿರಿಜನರ ಉಪ ಯೋಜನೆ ಅಡಿಯಲ್ಲಿ ₹2 ಕೋಟಿ ಬಿಡುಗಡೆಯಾಗಿದ್ದು ಹನಗೋಡು ಅಣೆಕಟ್ಟೆಯ ಹಿನ್ನೀರಿನಿಂದ ಮರದೂರು, ದೊಡ್ಡಹೆಜ್ಜೂರು ಸೇರಿದಂತೆ ಈ ಭಾಗದ ನಾಲ್ಕು ಕೆರೆಗಳಿಗೆ ನೀರು ಹರಿಸಲಾಗುವುದು. ಈ ಯೋಜನೆಯಲ್ಲಿ ಅಂದಾಜು 200 ಹೆಕ್ಟೇರ್ ಪ್ರದೇಶ ಅಚ್ಚುಕಟ್ಟು ಪ್ರದೇಶವಾಗಲಿದೆ ಎಂದು ತಿಳಿಸಿದ್ದಾರೆ.
**
ಹನಗೋಡು ಅಣೆಕಟ್ಟೆ ಹಾಗೂ ನಾಲೆ ಆಧುನೀಕರಣಗೊಳಿಸಲು ₹163 ಕೋಟಿ ಯೋಜನೆಯ ಕಾಮಗಾರಿ ಅನುಮೋದನೆಗೆ ಸಚಿವ ಸಂಪುಟದ ಅನುಮೋದನೆಗೆ ಮಂಡಿಸಲಾಗಿದೆ
-ಎಚ್.ಪಿ.ಮಂಜುನಾಥ್
ಶಾಸಕ