ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತ–ಪಾಕ್ ಪಂದ್ಯ ಡ್ರಾ

ಅಂತಿಮ ನಿಮಿಷದಲ್ಲಿ ತೀರ್ಪು ಮರುಪರಿಶೀಲನೆ ಮಾಡಿ ‘ಗೆದ್ದ’ ಎದುರಾಳಿಗಳು
Last Updated 7 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗೋಲ್ಡ್‌ ಕೋಸ್ಟ್‌: ಗೆಲುವಿನ ದಡ ಸೇರಿದ್ದ ಭಾರತದ ಆಟಗಾರರು ಕೊನೆಯ ಏಳು ಸೆಕೆಂಡುಗಳಲ್ಲಿ ಎಡವಿದರು. ಹೀಗಾಗಿ ಪಾಕಿಸ್ತಾನ ಎದುರಿನ ಹಾಕಿ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿತು.

ಶನಿವಾರ ನಡೆದ ‘ಬಿ’ ಗುಂಪಿನ ಮೊದಲ ಪಂದ್ಯದ ಕೊನೆಯ ಕ್ವಾರ್ಟರ್‌ನಲ್ಲಿ ಭಾರತ 2–1 ಗೋಲುಗಳ ಮುನ್ನಡೆ ಸಾಧಿಸಿತ್ತು. ಆದರೆ ಅಂತಿಮ ನಿಮಿಷದಲ್ಲಿ ಎರಡು ಬಾರಿ ಅಂಪೈರ್ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸಿದ ಪಾಕಿಸ್ತಾನ ಪೆನಾಲ್ಟಿ ಕಾರ್ನರ್ ಅವಕಾಶಗಳ ಪೈಕಿ ಒಂದರಲ್ಲಿ ಯಶಸ್ಸು ಕಂಡಿತು. ಹೀಗಾಗಿ  ಸೋಲಿನ ಸುಳಿಯಿಂದ ಹೊರಬಂದು ಸಂಭ್ರಮಪಟ್ಟಿತು.

ಆರಂಭದ ಕೆಲವು ನಿಮಿಷ ಸಮಬಲದ ಹೋರಾಟ ಕಂಡಿತು. ಆದರೆ ನಂತರ ಭಾರತ ಆಧಿಪತ್ಯ ಸ್ಥಾಪಿಸಿತು. 13ನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್‌ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. 19ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಹರ್ಮನ್‌ಪ್ರೀತ್‌ ಸಿಂಗ್ ಗೋಲು ಗಳಿಸಿ ಮುನ್ನಡೆಯನ್ನು ಹೆಚ್ಚಿಸಿದರು. ಪಾಕಿಸ್ತಾನದ ಪರ 38ನೇ ನಿಮಿಷದಲ್ಲಿ ಮಹಮ್ಮದ್ ಇರ್ಫಾನ್‌ ಮತ್ತು 60ನೇ ನಿಮಿಷದಲ್ಲಿ ಮುಬಷರ್ ಅಲಿ ಗೋಲು ಗಳಿಸಿದರು.

ಸಾಂಪ್ರದಾಯಿಕ ಎದುರಾಳಿಗಳ ಹಣಾಹಣಿ ವೀಕ್ಷಿಸಲು ಉಭಯ ರಾಷ್ಟ್ರಗಳ ಪ್ರೇಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಸಾವಿರಾರು ಆಸ್ಟ್ರೇಲಿಯಾ ಪ್ರೇಕ್ಷಕರು ಕೂಡ ಕುತೂಹಲದಿಂದ ಸೇರಿದ್ದರು.

ಅಡ್ಡಗೋಡೆಯಾದ ಶ್ರೇಜೇಶ್‌: ಕೊನೆಯ 15 ನಿಮಿಷಗಳಲ್ಲಿ ಪಾಕಿಸ್ತಾನ ಅನೇಕ ಬಾರಿ ಭಾರತದ ಪಾಳಯದಲ್ಲಿ ಆತಂಕ ಮೂಡಿಸಿತ್ತು. ನಿರಂತರ ಮೂರು ಪೆನಾಲ್ಟಿ ಕಾರ್ನರ್‌ ಅವಕಾಶಗಳು ಆ ತಂಡಕ್ಕೆ ಲಭಿಸಿದವು. ಆದರೆ ಗೋಲ್‌ಕೀಪರ್‌ ಶ್ರೀಜೇಶ್‌ ಎದುರಾಳಿಗಳ ಶ್ರಮವನ್ನು ನಿರಂತರವಾಗಿ ವಿಫಲಗೊಳಿಸಿದರು. ಸಮಬಲ ಸಾಧಿಸುವ ಉದ್ದೇಶದಿಂದ ಅಂತಿಮ ಎರಡು ನಿಮಿಷಗಳಲ್ಲಿ ಭಾರತದ ಆವರಣಕ್ಕೆ ನುಗ್ಗಿದ ಪಾಕಿಸ್ತಾನಕ್ಕೆ ಒಂದೆರಡು ಬಾರಿ ಉತ್ತಮ ಅವಕಾಶಗಳು ಲಭಿಸದವು. ಆದರೆ ಒಮ್ಮೆ ಎದೆಯಲ್ಲಿ ಚೆಂಡನ್ನು ತಡೆದು ಹೊರಗಟ್ಟಿದ ಶ್ರೇಜೇಶ್ ಮತ್ತೊಮ್ಮೆ ಮೋಹಕ ಡೈವ್ ಮಾಡಿ ಎದುರಾಳಿಗಳಿಗೆ ನಿರಾಸೆ ಮೂಡಿಸಿದರು.

ಏಳು ಸೆಕೆಂಡುಗಳು ಬಾಕಿ ಇದ್ದಾಗ ಪೆನಾಲ್ಟಿ ಕಾರ್ನರ್‌ಗಾಗಿ ಮನವಿ ಸಲ್ಲಿಸಿದ ಪಾಕಿಸ್ತಾನಕ್ಕೆ ಪೂರಕವಾಗಿ ತೀರ್ಪು ಬಂತು. ಆದರೆ ಗೋಲು ಗಳಿಸುವ ಶ್ರಮವನ್ನು ಭಾರತದ ರಕ್ಷಣಾ ವಿಭಾಗದವರು ವಿಫಲಗೊಳಿಸಿದರು. ಮರುಕ್ಷಣದಲ್ಲೇ ಮತ್ತೊಂದು ಮನವಿ ಸಲ್ಲಿಸಿದ ಪಾಕಿಸ್ತಾನ ಯಶಸ್ಸು ಕಂಡಿತು. ಮಿಂಚಿನ ವೇಗದಲ್ಲಿ ಮುಬಷರ್ ಅಲಿ ಚೆಂಡನ್ನು ಗುರಿಯತ್ತ ತೂರಿಬಿಟ್ಟರು. ಶ್ರೀಜೇಶ್ ಅವರನ್ನು ವಂಚಿಸಿ ಚೆಂಡು ಗೋಲುಪೆಟ್ಟಿಗೆಯನ್ನು ಸೇರಿತು.

ಭಾರತದ ಆಟ ನಿರಾಸೆ ತಂದಿದೆ: ಮ್ಯಾರಿಜ್‌

ಭಾರತ ತಂಡ ಆಡಿದ ರೀತಿ ನಿರಾಸೆ ಉಂಟುಮಾಡಿದೆ. ಇದು ನಾನು ಐದು ತಿಂಗಳಿಂದ ತರಬೇತಿ ನೀಡಿದ ತಂಡ ಹೌದೋ ಅಲ್ಲವೋ ಎಂಬ ಅನುಮಾನ ಮೂಡಿಸುವಂತಿತ್ತು ತಂಡದ ಆಟ ಎಂದು ಕೊಚ್ ಶೊರ್ಡ್‌ ಮ್ಯಾರಿಜ್ ಹೇಳಿದರು.

‘ಅತಿಯಾದ ಆತ್ಮವಿಶ್ವಾವೂ ಕೆಲವೊಮ್ಮೆ ಸಂಕಷ್ಟ ಉಂಟುಮಾಡುತ್ತದೆ. ನಮ್ಮ ಆಟಗಾರರು ಈ ಪಂದ್ಯದಲ್ಲಿ ಸಾಮಾನ್ಯ ಆಟ ಆಡಿದರು. ಈ ಪಂದ್ಯದ ಫಲಿತಾಂಶವನ್ನು ಮರೆತು ಮುಂದೆ ಸಾಗಬೇಕಾದ ಅಗತ್ಯವಿದೆ. ಭಾನುವಾರ ವೇಲ್ಸ್ ವಿರುದ್ಧ ನಡೆಯುವ ಪಂದ್ಯದಲ್ಲಿ ತಂಡ ಸುಧಾರಿಸಿಕೊಳ್ಳಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT