ನವದೆಹಲಿ: ಕಳೆದ ವರ್ಷ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ಗೆ ಸಂಬಂಧಿಸಿ ತನಿಖೆ ನಡೆಸಲು ಐಸಿಸಿ ನಿರ್ಧರಿಸಿದೆ.
ಗಾಲ್ನಲ್ಲಿ ನಡೆದ ಪಂದ್ಯದಲ್ಲಿ ಪಿಚ್ ತಮಗೆ ಬೇಕಾದಂತೆ ಸಿದ್ಧಪಡಿಸುವಂತೆ ಕ್ರೀಡಾಂಗಣ ಸಿಬ್ಬಂದಿಗೆ ಆಮಿಷ ಒಡ್ಡಿದ್ದಾರೆ ಎಂದು ಅಲ್ ಜಜೀರಾ ಟೆಲಿವಿಷನ್ ನೆಟ್ವರ್ಕ್ ಸಂಸ್ಥೆ ಹೇಳಿದೆ.
ಸಂಸ್ಥೆ ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ, ಮುಂಬೈನ ಹಿರಿಯ ಪ್ರಥಮ ದರ್ಜೆ ಕ್ರಿಕೆಟರ್ ರಾಬಿನ್ ಮಾರಿಸ್ ಅವರು ಆಮಿಷ ಒಡ್ಡಿದ್ದು ಕಂಡುಬಂದಿದೆ ಎನ್ನಲಾಗಿತ್ತು.
‘ಸದ್ಯ ಲಭ್ಯ ಇರುವ ಮಾಹಿತಿ ಆಧರಿಸಿ ಭ್ರಷ್ಟಾಚಾರ ನಿಗ್ರಹ ಘಟಕದವರು ತನಿಖೆ ಆರಂಭಿಸಿದ್ದಾರೆ. ಶೀಘ್ರದಲ್ಲೇ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಕೋರಲಾಗಿದೆ’ ಎಂದು ಐಸಿಸಿ ಪ್ರಧಾನ ವ್ಯವಸ್ಥಾಪಕ ಅಲೆಕ್ಸ್ ಮಾರ್ಷಲ್ ತಿಳಿಸಿದ್ದಾರೆ.