ರಾಯಚೂರು: ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಮಾತ್ರ ರೈತರ ಆದಾಯ ದ್ವಿಗುಣ ಮಾಡುವುದಕ್ಕೆ ಸಾಧ್ಯವಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಬಿ.ಎಂ.ಚಿತ್ತಾಪುರ ಹೇಳಿದರು.
ನಗರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ‘ಜಿಲ್ಲೆಯ ಪ್ರಗತಿಪರ ರೈತರಿಗೆ ’ಸಮಗ್ರ ಕೃಷಿ ಪದ್ಧತಿಯ ಮೂಲಕ ಆದಾಯ ದ್ವಿಗುಣಗೊಳಿಸುವಿಕೆ’ ಕುರಿತ ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಕೃಷಿ ಮಾತ್ರವಲ್ಲದೆ ಶಿಕ್ಷಣ, ಮೂಲ ಸೌಕರ್ಯಗಳ ಸರ್ವತೋಮುಖ ಅಭಿವೃದ್ಧಿ ಮಾಡುವುದು ಈ ಯೋಜನೆಯ ಗುರಿಯಾಗಿದೆ. ರೈತರು ಸಮಗ್ರ ಕೃಷಿ ಪದ್ಧತಿಯನ್ನು. ಅಳವಡಿಸಿಕೊಂಡರೆ ಮಾತ್ರ ರೈತರು ಆರ್ಥಿಕವಾಗಿ ಸಬಲರಾಗಬಲು ಸಾಧ್ಯ ಎಂದು ಸಲಹೆ ನೀಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಎಸ್. ಎಸ್. ಅಬೀದ್ ಮಾತನಾಡಿ, ರೈತರು ಪ್ರಗತಿಯಾಗಬೇಕಾದರೆ ಮುಖ್ಯವಾಗಿ ಕಾಲಕ್ಕೆ ತಕ್ಕಂತೆ ಕೃಷಿಯನ್ನು ಮಾಡಬೇಕು. ಮಾರುಕಟ್ಟೆ ಅಧಾರಿತ ಕೃಷಿ, ಪ್ರತಿ ಹಂತದಲ್ಲಿ ಯೋಚಿಸಿ ಯೋಜನೆ ಮಾಡಿಕೊಂಡು ಕೃಷಿಯನ್ನು ಮಾಡಬೇಕು ಎಂದು ತಿಳಿಸಿದರು.
ಡಾ. ನಹೀಮ್ ಹುಸೇನ್ ಮಾತನಾಡಿದರು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಬಿ. ಎಂ. ಚಿತ್ತಾಪುರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಸ್.ಯಡಹಳ್ಳಿ, ಸಹಾಯಕ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ನಾಗರಾಳ್ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ರೈತರು ಇದ್ದರು.
ಡಾ. ಜೆ. ಎನ್. ಶ್ರೀಧರ ಅವರು ಪಶುಸಂಗೋಪನೆಯ ಪಾತ್ರ, ಡಾ. ಶ್ರೀವಾಣಿ ಜಿ.ಎನ್. ಅವರು ಜೇನು ಕೃಷಿಯ ಮಹತ್ವ, ಡಾ. ಅನುಪಮಾ ಸಿ. ಇವರು ಅಣಬೆ ಬೇಸಾಯ ಹಾಗೂ ಎಂ.ಸಿ. ಪಾಟೀಲ ಅವರು ಎರೆಗೊಬ್ಬರ ಉತ್ಪಾದನೆಯ ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಸ್.ಯಡಹಳ್ಳಿ ಸ್ವಾಗತಿಸಿದರು.