ಮಸ್ಕಿ: ‘ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಕೆಲಸ ಮಾಡುತ್ತಿವೆ’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅಭಿಪ್ರಾಯಪಟ್ಟರು.
ಕೇಂದ್ರದ ಮೋದಿ ಸರ್ಕಾರಕ್ಕೆ ಏಳು ವರ್ಷ ತುಂಬಿದ ಕಾರಣ ಪಟ್ಟಣದ ಕೋವಿಡ್ ಆರೈಕೆ ಕೇಂದ್ರದ ಸೋಂಕಿತರಿಗೆ ಬಿಜೆಪಿಯಿಂದ ಆಹಾರಧಾನ್ಯದ ಕಿಟ್ ವಿತರಿಸಿ, ನಂತರ ಮಾತನಾಡಿದರು.
‘ಕೋವಿಡ್ ಕುರಿತು ಭಯಪಡುವ ಅಗತ್ಯವಿಲ್ಲ. ಮಾರ್ಗಸೂಚಿ ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಜತೆ ಕೈಜೋಡಿಸಬೇಕು’ ಎಂದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಗತ್ತೇ ಭಾರತದತ್ತ ತಿರುಗಿ ನೋಡುವಂತ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಪ್ರತಿಪಕ್ಷಗಳ ಟೀಕೆಗೆ ಅರ್ಥವಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಅಪ್ಪಾಜಿಗೌಡ, ಶರಣಬಸವ ವಕೀಲ, ಶರಣಯ್ಯ ಸೊಪ್ಪಿಮಠ, ಅಭಿಜಿತ್ ಮಾಲಿ ಪಾಟೀಲ, ನಾಗರಾಜ ಯಂಬಲದ, ಚೇತನ ಪಾಟೀಲ, ಮೌನೇಶ ನಾಯಕ, ಶರಣಯ್ಯ ಗುಡದೂರು, ಮಲ್ಲಿಕಾರ್ಜುನ ಆಚ್ಚಾ ಹಾಗೂ ಶರಣಬಸವ ಹರವಿ ಇದ್ದರು.