ರಾಯಚೂರು: ಜಿಲ್ಲೆಯಲ್ಲಿ ಶನಿವಾರ ಬೆಳಗಿನ ಜಾವ 5 ಗಂಟೆಯಿಂದ ಮಳೆ ಬಿರುಸಿನಿಂದ ಸುರಿಯುತ್ತಿದ್ದು, ಸಹಜ ಜನಜೀವನ ಅಸ್ತವ್ಯಸ್ತವಾಗಿದೆ.
ದಿನಪತ್ರಿಕೆ, ಹಾಲು ಹಾಗೂ ತರಕಾರಿ ಮಾರಾಟ–ಖರೀದಿಗೆ ವ್ಯತ್ಯಯವಾಗಿದೆ. ಮಳೆ ಬೀಳುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬಹಳಷ್ಟು ಅಂಗಡಿ ಮುಂಗಟ್ಟುಗಳುತೆರೆದಿಲ್ಲ. ರಸ್ತೆಗಳಲ್ಲಿ ಮಳೆನೀರು ರಭಸವಾಗಿ ಹರಿಯುತ್ತಿದೆ.
ರಾಯಚೂರು ನಗರದ ಬಡಾವಣೆ ರಸ್ತೆಗಳು ಸಣ್ಣ ಕೆರೆಗಳಂತೆ ಕಾಣುತ್ತಿವೆ. ಮುಖ್ಯರಸ್ತೆಗಳು ಹೊರತಾಗಿ ಉಪರಸ್ತೆಗಳಲ್ಲಿ ವಾಹನಗಳು ಸಂಚರಿಸದ ಸ್ಥಿತಿ ಇದೆ. ಕಚೇರಿ ಕೆಲಸಗಳಿಗೆ ಮನೆಯಿಂದ ಹೊರಹೋಗಲು ಸಾಧ್ಯವಾಗುತ್ತಿಲ್ಲ. ಆಟೋಗಳು ಸೇರಿ ವಾಹನಗಳು ಸಂಚರಿಸುವುದು ವಿರಳವಾಗಿದೆ.
ಜಿಲ್ಲೆಯ ವಿವಿಧೆಡೆ ಒಂದುವಾರ ರಾತ್ರಿಯಿಡೀ ನಿರಂತರವಾಗಿ ಮಳೆ ಸುರಿದಿತ್ತು. ಮೂರು ದಿನಗಳಿಂದ ಬಿಡುವು ನೀಡಿದ್ದರಿಂದ ಜನರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದರು. ಇದೀಗ ಮತ್ತೆ ಮಳೆ ಸುರಿಯುತ್ತಿದೆ.