ಹಟ್ಟಿ ಚಿನ್ನದ ಗಣಿ: ’ಹಟ್ಟಿ ಚಿನ್ನದ ಗಣಿ ಕಂಪೆನಿಯ ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಪ್ರಭಾಕರ ಸಂಗೂರ ಮಠ ಅವರು, ಕಾರ್ಮಿಕರ ಮಕ್ಕಳಿಗೆ ನೌಕರಿ ಕೊಡುವ ಬದಲಾಗಿ ಹಣಕಾಸು ಸವಲತ್ತು ಕೊಡುವುದಾಗಿ ಶುಕ್ರವಾರ ಹೊರಡಿಸಿದ್ದ ಪ್ರಕಟಣೆಯನ್ನು ನಾವು ಒಪ್ಪುವುದಿಲ್ಲ’ ಎಂದು ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಡಿ. ಅಮೀರ ಅಲಿ ತಿಳಿಸಿದ್ದಾರೆ.
ಜನವರಿ 12ರಂದು ಗಣಿಯ ಉನ್ನತಾಧಿಕಾರಿಗಳು ಹಾಗೂ ಕಾರ್ಮಿಕ ಸಂಘ ಪದಾಧಿಕಾರಿಗಳ ನಡುವೆ ನಡೆದ ಚರ್ಚೆಯಲ್ಲಿ 2018ರ ಜೂನ್ 26 ರಂದು ನಡೆದ 406ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ವೈದ್ಯಕೀಯ ಅನರ್ಹತೆ ಆಧಾರವಾಗಿ ಕಾರ್ಮಿಕರನ್ನು ನಿವೃತ್ತಿಗೊಳಿಸಿ ಅವರ ಮಕ್ಕಳಿಗೆ ಗಣಿಯಲ್ಲಿ ಕೆಲಸಕೊಡಲು ನಿರ್ದೇಶಕ ಮಂಡಳಿ ಅನುಮೋದನೆ ನೀಡಿದೆ ಎಂದು ಸಭೆಯ ನಡವಳಿಕೆ ಪ್ರತಿಯನ್ನು ನೀಡಿದ್ದ ಹಿನ್ನೆಲೆಯಲ್ಲಿ ಸಂಘ ಪ್ರಕಟಣೆ ಹೊರಡಿಸಿತ್ತು ಎಂದರು.