ಸಿಂಧನೂರು: ಭಾರತೀಯ ಜನತಾ ಪಕ್ಷವು ಜಾತಿ, ಧರ್ಮ, ದೇವರುಗಳ ಹೆಸರಿನಲ್ಲಿ ಸಮಾಜದಲ್ಲಿ ಕಂದಕ ಸೃಷ್ಠಿ ಮಾಡುವ ಮೂಲಕ ದೇಶ ಒಡೆಯುವ ಕೆಲಸ ಮಾಡುತ್ತಿದೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತವನ್ನು ಚೂರು ಚೂರು ಮಾಡಲು ಬಿಜೆಪಿ ಹೊರಟಿದೆ ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ ಟೀಕಿಸಿದರು.
ತಾಲ್ಲೂಕಿನ ಗಾಂಧಿನಗರ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬುಧವಾರ ರಾತ್ರಿ ನಡೆದ ಜಾಲಿಹಾಳ ಜಿಲ್ಲಾ ಪಂಚಾಯಿತಿ ಮಟ್ಟದ ಕಾರ್ಯಕರ್ತರ ಹಾಗೂ ಪ್ರಮುಖರ ಸಭೆ ಹಾಗೂ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಪರ ಮತಯಾಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದ ಸ್ವಾತಂತ್ರಕ್ಕಾಗಿ ಕಾಂಗ್ರೆಸ್ ತ್ಯಾಗ, ಬಲಿದಾನ ನೀಡಿದೆ. ಆದರೆ ಮಾತ್ತೆತ್ತಿದರೆ ದೇಶ ಪ್ರೇಮಿಗಳು ಎಂದು ಬಿಂಬಿಸಿಕೊಳ್ಳುವ ಬಿಜೆಪಿಯ ಒಬ್ಬರಾದರೂ ಪ್ರಾಣ ಕೊಟ್ಟಿದ್ದಾರಾ. ನರೇಂದ್ರ ಮೋದಿ ಎರಡು ಅವಧಿಯಲ್ಲಿ ಮಾಡಿದ ಅಭಿವೃದ್ದಿ ಬಗ್ಗೆ ಎಲ್ಲೂ ಹೇಳಿಕೊಳ್ಳುತ್ತಿಲ್ಲ. ಜಾತಿ, ಧರ್ಮ, ದ್ವೇಷದ ಭಾಷಣ ಮಾಡಿ ಮತ ಕೇಳುವ ಮೂಲಕ ಸಮಾಜ ಒಡೆಯುವ ಪ್ರಯತ್ನ ನಡೆಸಿದ್ದಾರೆ ಎಂದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನ ಹಾಗೂ ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಜಾರಿ ಮಾಡಿದೆ. ಇದರ ಪ್ರತಿಫಲವಾಗಿ ಅನೇಕರು ಸರ್ಕಾರದ ಉನ್ನತ ಹುದ್ದೆಗಳಿಗೆ ಹೋಗಲು ಸಾಧ್ಯವಾಗಿದೆ. ರೈತರ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಕಲ್ಪಿಸಲು ಸೋಲಾರ್ ಸಿಸ್ಟಮ್ ಅಳವಡಿಸಲು ನಿರ್ಣಯ ಕೈಗೊಂಡಿದ್ದು, ಇದು ರೈತರ ಬಗ್ಗೆ ಕಾಂಗ್ರೆಸ್ಗೆ ಇರುವ ಬದ್ಧತೆಯಾಗಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್, ಕೊಪ್ಪಳ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜನಾರ್ಧನ ಹುಲಿಗಿ ಮಾತನಾಡಿದರು. ತರಿಕೇರಿ ಶಾಸಕ ಶ್ರೀನಿವಾಸ, ಕಾಂಗ್ರೆಸ್ ಮುಖಂಡರಾದ ಎಂ.ಕಾಳಿಂಗಪ್ಪ, ಸಿದ್ರಾಮಪ್ಪ ಮಾಡಶಿರವಾರ, ಲಿಂಗರಾಜ ಪಾಟೀಲ್, ಜಾಫರ್ಅಲಿ ಜಾಗೀರದಾರ್, ಶಿವರಾಜ ಪಾಟೀಲ್, ಗೋಪಿನೀಡಿ ಕೃಷ್ಣ, ರಾಮಚಂದ್ರರಾವ್, ಅಂಬ್ರೋಸ್, ರಾಮಣ್ಣ, ಶ್ರೀದೇವಿ ಶ್ರೀನಿವಾಸ ಇದ್ದರು.
ರೋಡ್ ಶೋ: ಕಾರ್ಯಕ್ರಮಕ್ಕೂ ಮುನ್ನ ಗಾಂಧಿನಗರದ ಶಿವ ದೇವಾಲಯದಿಂದ ಸುಮಾರು ಒಂದು ಕಿ.ಮೀ.ವರೆಗೆ ತೆರೆದ ವಾಹನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಶಾಸಕ ಹಂಪನಗೌಡ ಬಾದರ್ಲಿ ಅವರು ಅಪಾರ ಜನಸ್ತೋಮದ ನಡುವೆ ರೋಡ್ ಶೋ ನಡೆಸಿ ಮತಯಾಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.