ಕವಿತಾಳ: ರಾಜ್ಯ ಸರ್ಕಾರ ಘೋಷಿಸಿರುವ ಗೃಹಲಕ್ಷ್ಮೀ ಯೋಜನೆಯ ಮಾಸಿಕ ₹2 ಸಾವಿರ ಧನ ಸಹಾಯ ಸೌಲಭ್ಯ ಪಡೆಯಲು ಮುಂದಾಗಿರುವ ಮಹಿಳೆಯರು, ಆಧಾರ್ ತಿದ್ದುಪಡಿಗೆ ಪಟ್ಟಣದ ಎಸ್ ಬಿಐ ಬ್ಯಾಂಕ್ ಮುಂದೆ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಗುರುವಾರ ಕಂಡು ಬಂತು.
‘10 ವರ್ಷಗಳ ನಂತರ ಆಧಾರ್ ಗುರುತಿನ ಚೀಟಿಯನ್ನು ನವೀಕರಿಸುವುದು, ಹೆಸರು, ಜನ್ಮ ದಿನಾಂಕ ವಿಳಾಸ ಮತ್ತಿತರ ಮಾಹಿತಿಯನ್ನು ಸರಿಪಡಿಸುವುದು, ಮೊಬೈಲ್ ಸಂಖ್ಯೆಯನ್ನು ಆಧಾರ್ ಜತೆ ಲಿಂಕ್ ಮಾಡಿಸುವುದು ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸಲು ಬಂದಿದ್ದಾಗಿ ಮಹಿಳೆಯರು’ ಹೇಳಿದರು.
‘ಶಾಲೆಗಳು ಆರಂಭವಾಗಿದ್ದು ಮಗುವನ್ನು ಶಾಲೆಗೆ ಸೇರಿಸಲು ಆಧಾರ್ ಕಾರ್ಡ್ ಬೇಕಿದೆ. ಹೀಗಾಗಿ ಮಗುವಿನ ಆಧಾರ್ ಕಾರ್ಡ್ ಮಾಡಿಸುತ್ತಿದ್ದೇನೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಅವಶ್ಯವಿದ್ದು ಅದನ್ನು ನವೀಕರಿಸಲು ಬಂದಿದ್ದೇನೆ’ ಎಂದು ಶಿವಮ್ಮ ತಿಳಿಸಿದರು.
‘ಈಗಾಗಲೇ ಒಮ್ಮೆ ಆಧಾರ್ ಕಾರ್ಡ್ ಪಡೆಯಲು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಇದೀಗ ನವೀಕರಣ, ತಿದ್ದುಪಡಿ ಹೀಗೆ ಸರ್ಕಾರದ ಪ್ರಯೋಜನ ಪಡೆಯಲು ಮತ್ತೊಮ್ಮೆ ಆಧಾರ್ ಕೇಂದ್ರದ ಮುಂದೆ ನಿಲ್ಲುವಂತಾಗಿದೆ. ಹೆಚ್ಚುವರಿ ಕೇಂದ್ರಗಳನ್ನು ತೆರೆದು ಆಧಾರ್ ಕಾರ್ಡ್ ಪಡೆಯುವುದನ್ನು ಸರಳ ಗೊಳಿಸಬೇಕು’ ಎಂದು ವಿಶಾಲಾಕ್ಷಿ ಒತ್ತಾಯಿಸಿದರು.
ಕವಿತಾಳ ಎಸ್ಬಿಐ ಬ್ಯಾಂಕಿನಲ್ಲಿ ಗುರುವಾರ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಸರತಿಯಲ್ಲಿ ನಿಂತ ಜನ