ರಾಯಚೂರು: ‘ಆರೋಗ್ಯ ಕ್ಷೇತ್ರದಲ್ಲಿ ವೈದ್ಯರ ಜತೆಗೆ ಶೂಶ್ರೂಷಕರ ಸೇವೆ ಮಹತ್ವದ್ದಾಗಿದೆ. ಯಾವುದೇ ತಾರತಮ್ಯ ಮಾಡದೇ ರೋಗಿಗಳ ಆರೈಕೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ತೋರುತ್ತಿದ್ದಾರೆ‘ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ರಾಜಯೋಗಿನಿ ಸ್ಮಿತಾ ಅಕ್ಕ ಬಣ್ಣಿಸಿದರು.
ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಭಾನುವಾರ ಅಂತರ ರಾಷ್ಠ್ರೀಯ ಶೂಶ್ರೂಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೋವಿಡ್ ವೇಳೆಯಲ್ಲಿ ನಮ್ಮವರನ್ನು ನಾವೇ ಮುಟ್ಟಲಿಲ್ಲ, ಮಾತನಾಡಿಸಲಿಲ್ಲ ಆದರೆ ಆಸ್ಪತ್ರೆಗಳಲ್ಲಿ ಯಾವ ಸಂಬಂಧ ಪರಿಚಯವೇ ಇಲ್ಲದ ದಾದಿಯರು ತಮ್ಮ ಜೀವದ ಹಂಗನ್ನು ತೊರೆದು ರೋಗಿಗಳಿಗೆ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ. ದೇಶಕ್ಕೆ ವೈದ್ಯರು ಮತ್ತು ದಾದಿಯರು ಬೆನ್ನೆಲುಬಾಗಿದ್ದಾರೆ’ ಎಂದು ಹೇಳಿದರು.
ಇದೇ ವೇಳೆ ನೇತ್ರ ತಪಾಸಣಾ ಶಿಬಿರ ನಡೆಯಿತು. ಭಾರತೀಯ ರೆಡ್ ಕ್ರಾಸ್ನ ದಂಡಪ್ಪ ಬಿರಾದಾರ ಮಾತನಾಡಿದರು. ಈಶ್ವರೀಯ ವಿದ್ಯಾಲಯದ ವ್ಯವಸ್ಥಾಪಕಿ ಶಾರದಾ ಅಕ್ಕ, ಸುಪ್ರಿಂಕೋರ್ಟ್ ವಕೀಲ ಕೆ. ದೇವಣ್ಣ ನಾಯಕ, ಸಿ.ಬಿ. ಪಾಟೀಲ, ಜಗದೀಶ, ನಾಗಚಂದ್ರರೆಡ್ಡಿ ಉಪಸ್ಥಿತರಿದ್ದರು.