ಮಸ್ಕಿ: ನವಜೀವನಕ್ಕೆ ಕಾಲಿಟ್ಟಿದ್ದ ದಂಪತಿಗಳು ಮದುವೆ ಮಂಟಪದ ವೇದಿಕೆ ಮೇಲೆ ಮತದಾನ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಮತದಾನ ಜಾಗೃತಿ ಅಭಿಯಾನವನ್ನು ವಿಶೇಷವಾಗಿ ಆಚರಿಸಿದ ಘಟನೆ ತಾಲ್ಲೂಕಿನ ಬಳಗಾನೂರು ಗ್ರಾಮದಲ್ಲಿ ಗುರುವಾರ ನಡೆಯಿತು.
ತಾಲ್ಲೂಕು ಪಂಚಾಯಿತಿ ಹಾಗೂ ಸ್ವೀಪ್ ಸಮಿತಿ ಸಿಬ್ಬಂದಿ ಮದುವೆ ಮಂಟಪಕ್ಕೆ ತೆರಳಿ ವೇದಿಕೆ ಮೇಲೆ ಇದ್ದ ನವದಂಪತಿಗಳಾದ ಶ್ರೀನಿವಾಸರಾವ್ ಮತ್ತು ವೇದಾಶ್ರೀ ಅವರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ನವ ವಧುವರರಿಗೆ ಶುಭ ಕೋರಲು ಬಂದಿದ್ದ ನೂರಾರು ಜನರಿಗೂ ಸಹ ಕಡ್ಡಾಯ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ತಾಲ್ಲೂಕು ಪಂಚಾಯಿತಿ ಮ್ಯಾನೇಜರ್ ಗಂಗಾಧರಮೂರ್ತಿ, ಚುನಾವಣೆ ಎಫ್ಎಸ್ಟಿ ತಂಡ ಕೆ. ಮಲ್ಲಯ್ಯ, ನವೀನಕುಮಾರ, ಚಂದ್ರಶೇಖರ ದಿನ್ನಿ, ಬಸವರಾಜ ಕಡಬೂರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಸರ್ಕಾರಿ ನೌಕರರು ಪಾಲ್ಗೊಂಡಿದ್ದರು.