ರಾಯಚೂರು: ದೈಹಿಕ, ಮಾನಸಿಕ, ಪೌಷ್ಟಿಕ ಹಾಗೂ ಆರ್ಥಿಕ ಸದೃಢತೆ ಸಾಧಿಸುವುದೇ ಆರೋಗ್ಯ ಆಗಿದೆ ಎಂದು ಭಾರತೀಯ ಕುಟುಂಬ ಯೋಜನಾ ಸಂಘದ ಅಧ್ಯಕ್ಷ ಡಾ.ವಿ.ಎ.ಮಾಲಿಪಾಟೀಲ ಹೇಳಿದರು.
ನಗರದ ವೀರಶೈವ ಎಚ್ಸಿಎಂಎಸ್ಕೆ ಬಿಇಡಿಕಾಲೇಜಿನಲ್ಲಿ ಭಾರತೀಯ ಕುಟುಂಬ ಯೋಜನಾ ಸಂಘದಿಂದ ಗುರುವಾರ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿದಿನ ವ್ಯಾಯಾಮ, ಯೋಗ, ಧ್ಯಾನದಿಂದ ದೈಹಿಕ ಆರೋಗ್ಯ, ಒಳ್ಳೆಯ ಆಲೋಚನೆ, ಸಕಾರಾತ್ಮಕ ಮನೋಭಾವನೆಯಿಂದ ಮಾನಸಿಕ ಆರೋಗ್ಯ ಪಡೆಯಬಹುದು. 12ನೇ ಶತಮಾನದಲ್ಲಿ ಬಸವಣ್ಣ ವಚನಗಳ ಮೂಲಕ ಆರೋಗ್ಯದ ಅರಿವು ಮೂಡಿಸಿದ್ದಾರೆ ಎಂದರು.
1950 ಏಪ್ರಿಲ್ 7ರಂದು ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ದಿನಾಚರಣೆ ಜಾರಿಗೆ ತಂದಿದೆ. ಜನರ ಆರೋಗ್ಯದ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಸಮತೋಲಿತ ಆಹಾರ ಕೂಡ ಸಧೃಡ ಆರೋಗ್ಯವನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚರ್ಯ ಸಿದ್ಧರಾಮಯ್ಯ ಹಿರೇಮಠ ಮಾತನಾಡಿ, ನಾಲಿಗೆಗೆ ರುಚಿಯಾಗಿದ್ದು ಅನಾರೋಗ್ಯ, ನಾಲಿಗೆಗೆ ಕಹಿಯಾಗಿದ್ದು ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಬೇಕಾದರೆ ಆರೋಗ್ಯವು ತುಂಬಾ ಮುಖ್ಯವಾಗಿದೆ ಎಂದರು.