ಲಿಂಗಸುಗೂರು: ಪೊಲೀಸ್ ಉಪ ವಿಭಾಗ ವ್ಯಾಪ್ತಿಯಲ್ಲಿ ದಾಖಲೆಗಳಿಲ್ಲದೆ ಅಕ್ರಮ ಮರಳು ಸಂಗ್ರಹಣೆ ಮಾಡಿದ್ದು ಪತ್ತೆಯಾದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಅನಿತಾ ಹದ್ದಣ್ಣವರ ಹೇಳಿದರು.
ಸೋಮವಾರ ಗುರಮ್ಮ ದೇವರಾಜ ನಿವೇಶನದಲ್ಲಿನ 150 ಕ್ಯೂಬಿಕ್ ಮೀಟರ್ ಅಕ್ರಮ ಮರಳು ವಶಪಡಿಸಿಕೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಹೊಸ ಮರಳು ನೀತಿ ಅನ್ವಯ ಸರ್ಕಾರ ಗುರುತಿಸಿದ ಸ್ಥಳದಿಂದ ಮಾತ್ರ ಅಧಿಕೃತ ಪರವಾನಗಿ ರಸೀದಿ ಪಡೆದು ಮರಳು ಸಾಗಣೆ ಅಥವಾ ಸಂಗ್ರಹಣೆ ಮಾಡುವುದು ಕಡ್ಡಾಯ ಎಂದರು.
ಅಕ್ರಮ ಮರಳು ಸಾಗಣೆ ಮಾಡುವವರು ಬಹುತೇಕ ಖಾಲಿ ನಿವೇಶನಗಳಲ್ಲಿ ಅನಧಿಕೃತ ಮರಳು ಸಂಗ್ರಹಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಬರುತ್ತಿವೆ. ಯಾವುದೇ ಸ್ಥಳದಲ್ಲಿ ದಾಖಲೆ ಹೊಂದಿರದ ಮರಳು ಸಂಗ್ರಹ ಕಂಡು ಬಂದಲ್ಲಿ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ವಿವರಿಸಿದರು.
ಪೊಲೀಸ್ ಇನ್ಸ್ಪೆಕ್ಟರ್ ಸುಶೀಲಕುಮಾರ. ಕಂದಾಯ ನಿರೀಕ್ಷಕ ತುಳುಜಾರಾಮಸಿಂಗ್. ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಶಿವನಗೌಡ ಪಾಟೀಲ ಇದ್ದರು.