ಒಂದು ವಾರದಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಮೀನುಗಳ ಒಡ್ಡುಗಳು ಕೊಚ್ಚಿ ಹೋಗಿದ್ದು, ಅಲ್ಲಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ರಾಯಚೂರು –ಬೆಳಗಾವಿ ರಾಜ್ಯ ಹೆದ್ದಾರಿ ಮತ್ತು ಬೀದರ್ ಶ್ರೀರಂಗಪಟ್ಟಣ ಮೇಲ್ದರ್ಜೆಗೇರಿಸಿದ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಇಬ್ಭಾಗಿಸುವ ಕಸಬಾ ಲಿಂಗಸುಗೂರು ಗ್ರಾಮದಲ್ಲಿ ಚರಂಡಿ ಮೇಲ್ಭಾಗ ಕುಸಿದಿರುವುದು ಅಪಾಯವನ್ನು ಆಹ್ವಾನಿಸುತ್ತಿದೆ. ಕಂದಕ ನಿರ್ಮಾಣವಾಗಿ ಒಂದು ವಾರ ಕಳೆದರೂ ದುರಸ್ತಿಗೆ ಕ್ರಮವಾಗಿಲ್ಲ.