ಲಿಂಗಸುಗೂರ: ಕೆಲ ವರ್ಷಗಳ ಹಿಂದೆಯಷ್ಟೆ ಲಿಂಗಸುಗೂರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಜರ್ಮನ್ ಆರ್ಥಿಕ ಸಹಾಯದಡಿ ನೂರು ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೊಂಡಿದೆ. ಕೋಟ್ಯಂತರ ಹಣ ಖರ್ಚು ಮಾಡಿ ತಲೆ ಎತ್ತಿನಿಂತಿರುವ ಆಸ್ಪತ್ರೆಗೆ ಅಗತ್ಯ ಮಷಿನರಿ ಸೌಲಭ್ಯಗಳನ್ನು ಪೂರೈಸಿಲ್ಲ. ಕೆಲ ಮಷಿನರಿಗಳು ಬಂದಿದ್ದು ಅಗತ್ಯ ತಜ್ಞ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆ ಅವ್ಯವಸ್ಥೆ ಆಗರವಾಗಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸೋಮವಾರ ಪಟ್ಟಣದ ಬಸ್ ನಿಲ್ದಾಣ ವೃತ್ತದಿಂದ ಕರವೇ ತಾಲ್ಲೂಕು ಅಧ್ಯಕ್ಷ ಜಿಲಾನಿಪಾಷ ನೇತೃತ್ವದಲ್ಲಿ ಆರಂಭಗೊಂಡ ಅರೆಬೆತ್ತಲೆ ಮೆರವಣಿಗೆ ಪಟ್ಟಣ ಪ್ರಮುಖ ಬೀದಿಗಳಲ್ಲಿ ಸರ್ಕಾರ ಮತ್ತು ಆಡಳಿತ ಶಾಹಿ ವ್ಯವಸ್ಥೆ ನಿರ್ಲಕ್ಷ್ಯ ವಿರೋಧಿಸಿ ಧಿಕ್ಕಾರದ ಕೂಗು ಹಾಕಿದರು. ಆಸ್ಪತ್ರೆಗೆ ತೆರಳಿ ಮುತ್ತಿಗೆ ಹಾಕಿ ಆಸ್ಪತ್ರೆ ಅವ್ಯವಸ್ಥೆಯಿಂದ ಜನಸಾಮಾನ್ಯರ ಆರೋಗ್ಯದ ಮೇಲಾಗಿರುವ ದುಷ್ಪರಿಣಾಮಗಳ ಕುರಿತು ಮುಖ್ಯ ವೈದ್ಯ ಡಾ. ಶಿವಬಸಪ್ಪ, ಸಹಾಯಕ ಆಯುಕ್ತ ಟಿ. ಯೊಗೇಶ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಆಸ್ಪತ್ರೆಗೆ ಅತ್ಯಗತ್ಯವಾದ ಮಷಿನರಿ ಪೂರೈಕೆಯಲ್ಲಿ ಸರ್ಕಾರ ಮೀನಾಮೇಷ ಮಾಡುತ್ತಿದೆ. ಡೆಂಗೆ ಮತ್ತು ಮಲೇರಿಯಾ ಪ್ರಕರಣಗಳು ನಿಯಂತ್ರಣ ಮೀರಿದ್ದು ಸಾವು ನೋವು ಸಂಭವಿಸಿದರು ಕೂಡ ತಾಲ್ಲೂಕು ಆರೋಗ್ಯ ಇಲಾಖೆ ಕಿಂಚಿತ್ತು ಚಿಂತನೆ ಮಾಡುತ್ತಿಲ್ಲ. ಸ್ತ್ರೀರೋಗ ಮತ್ತು ಹೃದಯ ತಜ್ಞರ ಕೊರತೆಯಿಂದ ಸಾವಿನ ಸಂಖ್ಯೆ ಹೆಚ್ಚಳಗೊಂಡಿದೆ. ಸರಳ ಹೆರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶಾಪವಾಗಿ ಪರಿಣಮಿಸಿದೆ.
ಈ ಹಿನ್ನಲೆಯಲ್ಲಿ ಅಗತ್ಯ ಸೌಲಭ್ಯ ಮತ್ತು ಸಿಬ್ಬಂದಿ ನೇಮಕ ಕೂಡಲೆ ಮಾಡಬೇಕು. ಇಲ್ಲದೆ ಹೋದಲ್ಲಿ ಹೋರಾಟ ಚುರುಕುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ಶಿವರಾಜ ನಾಯಕ, ಅಜೀಜಪಾಷ, ಆಂಜನೇಯ ಭಂಡಾರಿ, ಬಿ.ಎಸ್. ನಾಯಕ, ಜಿಲಾನಿಹುಸೇನ, ಅಂಬಣ್ಣ, ಚಂದ್ರು, ಅಮರೇಶ, ರಾಘವೇಂದ್ರ, ವಿಜಯಕುಮಾರ, ಸಾಧಿಕ, ನಿತ್ಯಾನಂದ, ಯಲ್ಲಪ್ಪ, ರವಿಕುಮಾರ, ಶ್ರೀಶೈಲಗೌಡ, ಸದ್ದಾಂಹುಸೇನ, ಖಾಸಿಂಸಾಬ, ವೆಂಕಟೇಶ, ಬಸವರಾಜ ಮತ್ತಿತರರು ಭಾಗವಹಿಸಿದ್ದರು.