ರಾಯಚೂರು: ನಗರದ ಮಡ್ಡಿಪೇಟೆಯ ನಿವಾಸಿ ಅವಿನಾಶ ವರದಕ್ಷಿಣೆಗಾಗಿ ಜಮುನಾ ಎಂಬ ತನ್ನ ಪತ್ನಿ ಕೊಲೆ ಆರೋಪಿಯಾಗಿದ್ದು, ಆತನಿಗೆ ಶಿಕ್ಷೆ ವಿಧಿಸಬೇಕು, ಜಮುನಾ ಕೊಲೆಯಲ್ಲಿ ಶಾಮೀಲಾದ ಅತ್ತೆ, ಮಾವ, ಮೈದುನರ ವಿರುದ್ಧ ಎಫ್.ಐ.ಆರ್ ದಾಖಲು ಮಾಡಬೇಕು, ಜಮುನಾಳ ಕೊಲೆ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ಪ್ರಭಾವಿ ರಾಜಕೀಯ ಮುಖಂಡರನ್ನು ಕೊಲೆಗೆ ಪ್ರಚೋದಕರೆಂದು ಪರಿಗಣಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ ತಾಲ್ಲೂಕು ಘಟಕವು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಮುನಾಳ 10 ತಿಂಗಳು ಮಗು ತುಳಸಿಯ ರಕ್ಷಣೆ ದೃಷ್ಟಿಯಿಂದ ತಂದೆಯ ಆಸ್ತಿಯನ್ನು ಸರ್ಕಾರ ಕಬ್ಜಾ ಮಾಡಿ ಮಗುವಿಗೆ ಮೀಸಲಿಡಬೇಕು, ವರೋಪಚಾರ ಹೆಸರಿನಲ್ಲಿ ಅವಿನಾಶ ಕುಟುಂಬ ಪಡೆದ ಹಣ, ಒಡವೆ ಜಮುನಾಳ ಕುಟುಂಬಕ್ಕೆ ಹಿಂದಿರುಗಿಸಬೇಕು, ಜಮುನಾಳ ತಂದೆ–ತಾಯಿ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ರಕ್ಷಣೆ ನೀಡಬೇಕು ಎಂದು ಸಂಘಟನೆಯು ಒತ್ತಾಯ ಮಾಡಿತು. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ತಾಲ್ಲೂಕ ಘಟಕದ ಅಧ್ಯಕ್ಷೆ ಈರಮ್ಮ, ಕಾರ್ಯದರ್ಶಿ ಫರೀದಾ, ಜಮುನಾಳ ಸಹೋದರ ಕೃಷ್ಣಾ, ತಾಯಿ ಪಾರ್ವತಮ್ಮ, ಜೆ.ಎಂ ಚನ್ನಬಸವಯ್ಯ, ಕೆ.ಜಿ ವೀರೇಶ ಹಾಗೂ ಇತರರಿದ್ದರು