ಶಕ್ತಿನಗರ (ರಾಯಚೂರು ಜಿಲ್ಲೆ): ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್ಟಿಪಿಎಸ್)ಕ್ಕೆ ಕಲ್ಲಿದ್ದಲು ಜತೆಗೆ ದೊಡ್ಡ ಗಾತ್ರದ ಕಲ್ಲುಗಳನ್ನು ಪೂರೈಕೆ ಮಾಡುತ್ತಿರುವುದು ಕಂಡು ಬಂದಿದೆ.
ಸ್ಥಾವರದ ಎಂಟು ಘಟಕಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ನಿತ್ಯ 30 ಸಾವಿರ ಮೆ.ಟನ್ ಕಲ್ಲಿದ್ದಲು ಅಗತ್ಯವಿದೆ. ಆದರೆ ನಿತ್ಯ ಆರ್ಟಿಪಿಎಸ್ಗೆ ನಾಲ್ಕರಿಂದ ಐದು ರೇಕ್ (59 ಬೋಗಿಗಳಿರುವ ಸರಕು ಸಾಗಣೆ ರೈಲು)ಗಳಷ್ಟು ಕಲ್ಲಿದ್ದಲು ಪೂರೈಕೆಯಾಗುತ್ತಿದೆ.
‘ಮೂರು ತಿಂಗಳಲ್ಲಿ ವೆಸ್ಟರ್ನ್ ಕೋಲ್ ಲಿಂಕ್ ಮತ್ತು ಸಿಂಗರೇಣಿ ಕೋಲ್ ಲಿಂಕ್ ಕಂಪೆನಿಗಳಿಂದ 2,807 ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಕೆಯಾಗಿದೆ. ಅವುಗಳಲ್ಲಿ ದೊಡ್ಡ ದೊಡ್ಡ ಕಲ್ಲುಗಳಿವೆ. ಕಲ್ಲಿದ್ದಲು ಸಂಗ್ರಹ ಕಡಿಮೆ ಇರುವ ಕಾರಣ ಸಂಗ್ರಹಾಗಾರದ ಬದಲಾಗಿ ನೇರವಾಗಿ ವಿದ್ಯುತ್ ಘಟಕಗಳಿಗೆ ಸುರಿಯಲಾಗುತ್ತಿದೆ. ದೊಡ್ಡ ದೊಡ್ಡ ಕಲ್ಲುಗಳಿಂದಾಗಿ ವಿದ್ಯುತ್ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಉತ್ಪಾದನೆಯ ಮೇಲೂ ದುಷ್ಪರಿಣಾಮ ಬೀರಿದೆ’ ಎಂದು ಆರ್ಟಿಪಿಎಸ್ ಮೂಲಗಳು ತಿಳಿಸಿವೆ.
ಐದು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 920 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ವಾರ್ಷಿಕ ನಿರ್ವಹಣೆಗಾಗಿ 1 ಮತ್ತು 2ನೇ ಘಟಕಗಳಲ್ಲಿ ಮೊದಲೇ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಭಾನುವಾರ ಬೆಳಿಗ್ಗೆ 7ನೇ ಘಟಕದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಆ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.
ಕಲ್ಲಿದ್ದಲು ಸಂಗ್ರಹ ಪ್ರಮಾಣ ಈಚೆಗೆ ಸಂಪೂರ್ಣ ಕುಸಿದಿದ್ದು, ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ. ಏಳು ದಿನಕ್ಕೆ ಬೇಕಾಗುವಷ್ಟು ಕಲ್ಲಿದ್ದಲು ಇಲ್ಲದಿದ್ದರೆ ಗಂಭೀರ ಪರಿಸ್ಥಿತಿ ಎಂತಲೂ, ನಾಲ್ಕು ದಿನಕ್ಕೆ ಅಗತ್ಯ ಇರುವಷ್ಟು ಕಲ್ಲಿದ್ದಲು ಇಲ್ಲದಿದ್ದರೆ ತೀರಾ ಸಂಕಷ್ಟದ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ಒಂದು ದಿನಕ್ಕೆ ಬೇಕಾಗುವಷ್ಟೂ ಕಲ್ಲಿದ್ದಲು ಸಂಗ್ರಹವಿಲ್ಲ.
ಕಲ್ಲಿದ್ದಲು ಪೂರೈಕೆಯಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಬರುವುದು ಸಾಮಾನ್ಯ. ಈ ಕಲ್ಲು<br/>ಗಳನ್ನು ಸಂಗ್ರಹಿಸಿ ಗಣಿ ಕಂಪೆನಿಗಳಿಗೆ ಮಾಹಿತಿ ನೀಡಲಾಗುವುದು. ಸಿ.ವೇಣುಗೋಪಾಲ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಆರ್ಟಿಪಿಎಸ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.