ಸಿಂಧನೂರು: ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿಯ ಎದೆಹಾಲು ಉಣಿಸಿದರೆ ಆ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್.ದಾಸಪ್ಪನವರ್ ಹೇಳಿದರು.
ತಾಲ್ಲೂಕಿನ ಕುನ್ನಟಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಯುನಿಸೆಫ್ ಹೈದರಾಬಾದ್, ತಾಲ್ಲೂಕು ಬಿಸಿಸಿ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಎಚ್ಎನ್ಡಿ ಗ್ರಾಮ ಆರೋಗ್ಯ ಮತ್ತು ಪೌಷ್ಠಿಕ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಸಿಸಿ ತಾಲ್ಲೂಕು ಸಂಯೋಜಕ ಲಕ್ಷ್ಮಣ ರಾಠೋಡ್ ಮಾತನಾಡಿ, ಜನರು ಜಾಗೃತಗೊಂಡು ಪ್ರೋಟಿನ್ಯುಕ್ತ ಆಹಾರವನ್ನು ಸೇವನೆ ಮಾಡಬೇಕು. ಇದರಿಂದ ಆರೋಗ್ಯ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯ ಎಂದರು.
ಹಾರಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವರಾಜ, ಶಂಕರ ಟ್ರಸ್ಟ್ ಕಾಲೇಜ್ ಉಪನ್ಯಾಸಕ ಮಹಾಂತೇಶ, ಸ್ತ್ರೀಶಕ್ತಿ ಗುಂಪಿನ ಪ್ರತಿನಿಧಿಗಳಾದ ಶಾರದಾ ಕುನ್ನಟಗಿ ಕ್ಯಾಂಪ್, ನಾಗಲಕ್ಷ್ಮೀ, ಕುನ್ನಟಗಿ ಕ್ಯಾಂಪಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ವಿಠ್ಠಲದಾಸ, ವಾಜಪೇಯಿ ಆರೋಗ್ಯಶ್ರೀ ಯೋಜನೆಯ ಆರೋಗ್ಯ ಮಿತ್ರ ತಿಮ್ಮಣ್ಣ, ಕಿರಿಯ ಆರೋಗ್ಯ ಸಹಾಯಕಿ ರೇಷ್ಮಾ ಬೇಗಂ, ಅಂಗನವಾಡಿ ಕಾರ್ಯಕರ್ತರಾದ ಅಕ್ಕಮಹಾದೇವಿ, ಶಂಕ್ರಪ್ಪ, ಅಶಾ ಕಾರ್ಯಕರ್ತೆ ತೇಜಮ್ಮ ಭಾಗವಹಿಸಿದ್ದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಖಾದರಸಾಬ ಅಧ್ಯಕ್ಷತೆ ವಹಿಸಿದ್ದರು. ರೇಣುಕಾ ಪ್ರಾರ್ಥಿಸಿದರು. ಘನಮಠದಯ್ಯಸ್ವಾಮಿ ಸ್ವಾಗತಿಸಿದರು. ಚನ್ನಪ್ಪ ಅಗಸಿ ವಂದಿಸಿದರು.