ಲಿಂಗಸುಗೂರ: ಈಗಾಗಲೆ ತಾತ್ಕಾಲಿಕ ಪಡಿತರ ಕಾರ್ಡ್ ಹೊಂದಿದವರು ಭಾವಚಿತ್ರ ತೆಗೆಯಿಸಲು ಆಯಾ ಗ್ರಾಮ ಪಂಚಾಯಿತಿಗೆ ಹೋಗುವುದು ಕಡ್ಡಾಯ. ಕುಟುಂಬ ಸಮೇತ ಕಂಪ್ಯೂಟರ್ ಕೇಂದ್ರಕ್ಕೆ ತೆರಳಿದರೆ ಹೆಸರು, ವಿಳಾಸ ಇಂಗ್ಲಿಷ್ನಲ್ಲಿ ಇದ್ದರೆ ಮಾತ್ರ ಭಾವಚಿತ್ರ ತೆಗೆಯುವುದಾಗಿ ಕಂಪ್ಯೂಟರ್ ಆಪರೇಟರ್ಗಳು ಹೇಳುತ್ತಿರುವುದು ಗೊಂದಲ ಸೃಷ್ಟಿಸಿದೆ ಎಂದು ಗ್ರಾಮೀಣ ಜನತೆ ತಹಸೀಲ್ದಾರ ಜಿ. ಮುನಿರಾಜಪ್ಪ ಅವರಲ್ಲಿ ಅಳಲು ತೋಡಿಕೊಂಡಿದ್ದಾರೆ.
ತಾಲ್ಲೂಕಿನ 35 ಗ್ರಾಮ ಪಂಚಾಯಿತಿಗಳಲ್ಲಿ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಭಾವಚಿತ್ರ ತೆಗೆಯಲು ಬಂದಿದ್ದಾರೆ. ಉಳಿದಂತೆ ತಾಲ್ಲೂಕು ಕೇಂದ್ರಕ್ಕೆ 30-40ಕಿ.ಮೀ. ದೂರದಿಂದ ಬಂದು ವಾರಗಟ್ಟಲೆ ಸರದಿಯಲ್ಲಿ ಕಾಯುವಂತಾಗಿದೆ. ಇಷ್ಟೊಂದು ಪರದಾಡುವ ಸಾಮಾನ್ಯ ಜನತೆಗೆ ನಿಮ್ಮ ತಾತ್ಕಾಲಿಕ ಪಡಿತರ ಕಾರ್ಡ್ ಕನ್ನಡದಲ್ಲಿದೆ. ಹೆಸರು, ವಿಳಾಸ ತಹಸೀಲ್ದಾರರಿಂದ ಇಂಗ್ಲಿಷ್ನಲ್ಲಿ ಬರೆಯಿಸಿಕೊಂಡು ಬರುವಂತೆ ವಾಪಸ್ಸು ಕಳುಹಿಸುತ್ತಿರುವುದು ನುಂಗದ ತುತ್ತಾಗಿ ಪರಿಣಮಿಸಿದೆ.
ಪೈದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯದುರ್ಗದ ಬಹುತೇಕರಿಗೆ ತಾತ್ಕಾಲಿಕ ಪಡಿತರ ಕಾರ್ಡ್ ಕನ್ನಡದಲ್ಲಿಯೆ ಇರುವುದರಿಂದ ನೀಡಿದ ಅರ್ಜಿಯ ಮೇಲೆ ಇಂಗ್ಲಿಷ್ನಲ್ಲಿ ಬರೆಯಿಸಿಕೊಂಡು ಬರುವಂತೆ ಹಿಂಬರಹ ನೀಡಿರುವ ಹಲವು ಉದಾಹರಣೆಗಳಿವೆ. ಈ ಪೈಕಿ ಮಹಿಬೂಬಸಾಬ ಎಂಬುವವರು ಕಂಪ್ಯೂಟರ್ ಆಪರೇಟರ್ ನೀಡಿದ ಹಿಂಬರಹದ ನಕಲನ್ನು ತಹಸೀಲ್ದಾರ ಅವರಿಗೆ ನೀಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ಕಂಪ್ಯೂಟರ್ ಆಪರೇಟರ್ಗಳ ಅನಗತ್ಯ ಗೊಂದಲಗಳಿಂದ ಬೇಸರವಾಗಿದೆ. ಕರ್ನಾಟಕದಲ್ಲಿ ಕನ್ನಡದಲ್ಲಿ ಮುದ್ರಣಗೊಂಡಿರುವ ತಾತ್ಕಾಲಿಕ ಪಡಿತರ ಕಾರ್ಡ್ ಇಂಗ್ಲಿಷ್ನಲ್ಲಿ ಬರೆಯಿಸಿಕೊಂಡು ಬರುವಂತೆ ಹಿಂಬರಹ ನೀಡಿರುವುದು ನಾಚಿಗೇಡು ಸಂಗತಿ.
30-40 ಕಿ.ಮೀ. ದೂರದಿಂದ ಸಾಮಾನ್ಯ ಜನತೆಯನ್ನು ಹಿಂಬರಹ ನೀಡಿ ಕಳುಹಿಸುತ್ತಿರುವುದು ನೋವಿನ ಸಂಗತಿ. ಈ ಕೂಡಲೆ ಏಜೆನ್ಸಿ ಅವರಿಗೆ ಷೋಕಾಸ್ ನೋಟಿಸ್ ನೀಡಿ ಜನತೆಗೆ ಆಗುವ ಅನ್ಯಾಯ ಸರಿಪಡಿಸುವುದಾಗಿ ತಹಸೀಲ್ದಾರ ಜಿ. ಮುನಿರಾಜಪ್ಪ ಭರವಸೆ ನೀಡಿದರು.