ಹಟ್ಟಿ ಚಿನ್ನದ ಗಣಿ: ಹೈದರಾಬಾದ್ ಕರ್ನಾಟಕ ಪ್ರದೇಶ ಶೈಕ್ಷಣಿಕವಾಗಿ ಹಿಂದುಳಿದಿದೆ. ಪಾಲಕರು ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಹಕರಿಸಬೇಕು ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಸಮೀಪದ ಲೇಕ್ಮಚೇರಿ ದೊಡ್ಡಿ ಹಾಗೂ ಟಣಮನಕಲ್ಲ ಗ್ರಾಮಗಳಲ್ಲಿ 2016–17ನೇ ಸಾಲಿನ ಟಿಎಸ್ಪಿ ಯೋಜನೆ ಅಡಿಯಲ್ಲಿ ಆರಂಭಿಸಿರುವ ಸಿ.ಸಿ ರಸ್ತೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಪ್ರದೇಶ ಅಭಿವೃದ್ಧಿ ಹೊಂದಲು ಶಿಕ್ಷಣದ ಪಾತ್ರ ದೊಡ್ಡದಾಗಿದೆ ಎಂದರು.
ಮುಖಂಡ ರಾಜಾ ಸೋಮನಾಥ ನಾಯಕ ಮಾತನಾಡಿ, ಈ ಭಾಗ ಅಭಿವೃದ್ಧಿ ಹೊಂದಲು ಶಾಸಕರ ಜನಪರ ಕಾಳಜಿ ಕಾರಣ. 2008ರ ನಂತರ ಗುರುಗುಂಟಾ ಹೋಬಳಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ಹೇಳಿದರು.
ಗುರುಗುಂಟಾ ಹೊಸುರು, ಹಿರೆಮನೆರದೊಡ್ಡಿ, ಜಾಗೀರ ನಂದಿಹಾಳ, ಕೋಠಾ, ಲಿಂಗದೇವರ ದೊಡ್ಡಿ, ಲೇಕ್ಮಚೇರಿ, ರಾಯದುರ್ಗ, ಸೋಮನಾಥ ನಗರ, ಗುಜನರ ದೊಡ್ಡಿ ಹಾಗೂ ಟಣಮನಕಲ್ಲ ಗ್ರಾಮಗಳಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಪೈದೊಡ್ಡಿ ಗ್ರಾಮ ಪಂಚಾಯಿತಿಯ ಗುಂತಗೋಳ, ಗದಗಿ, ಕಡದರ ಗಡ್ಡಿ, ಪರಂಪುರ, ವಜಲಮ್ಮ ದೇವಸ್ಥಾನ, ತೋರಲಬೆಂಚಿ ದೊಣರದೊಡ್ಡಿ ಹಾಗೂ ಭೂಪೂರದೊಡ್ಡಿಯಲ್ಲಿ ಸಿ.ಸಿ ರಸ್ತೆ ನಿರ್ಮಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿವಾರ್ಹಕ ಎಂಜಿನಿಯರ್ ಅಶೋಕ ಬರಗುಂಡಿ ತಿಳಿಸಿದರು.
ಪರಮೇಶ ಯಾದವ್, ವೀರನಗೌಡ, ವೆಂಕನಗೌಡ ಐದನಾಳ, ಗೋವಿಂದ ನಾಯಕ, ಮುದಕಪ್ಪ ನಾಯಕ, ಸೈಯದ್ ಇಸ್ಮಾಯಿಲ್, ನಂದೇಶ ನಾಯಕ, ವೆಂಕಟೇಶ ಗುತ್ತೇದಾರ ಇದ್ದರು. ಸೋಮನಾಥ ನಾಯಕ ನಿರೂಪಿಸಿದರು.