ರಾಯಚೂರು: ಜಿಲ್ಲೆಯಾದ್ಯಂತ ನಾಲ್ಕೈದು ದಿನ ಸುರಿದ ಮಳೆಗೆ ವಿವಿಧ ಬೆಳೆ, ತರಕಾರಿ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿವೆ. ತರಕಾರಿ ಬೆಲೆ ಗಗನಕ್ಕೇರಿದ್ದು, ತರಕಾರಿ ಬೆಳೆಗಾರರು ತಮ್ಮ ಬೆಳೆಗೆ ಹೆಚ್ಚಿನ ಬೆಲೆ ನಿರೀಕ್ಷೆಯಲ್ಲಿದ್ದರು. ಈಗ ಸುರಿದ ಮಳೆಯಿಂದ ಬೆಳೆ ಹಾಳಾಗಿದೆ ಎಂದು ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ.
ಬುಧವಾರ ರಾತ್ರಿ ರಾಯಚೂರಲ್ಲಿ ಸುರಿದ ಮಳೆಗೆ ನಗರದ ಬಡಾವಣೆ ರಸ್ತೆಗಳು, ಪ್ರಮುಖ ರಸ್ತೆಗಳು ಜಲಾವೃತವಾಗಿದ್ದವು. ವಾಹನ ಸವಾರರು, ಪಾದಾಚಾರಿಗಳು ಪರದಾಡಿದರು. ಗಣೇಶೋತ್ಸವ ಹಿನ್ನೆಲೆಯಲ್ಲಿ ಸಂಜೆ ಸಾರ್ವಜನಿಕ ಗಣೇಶ ಮೂರ್ತಿ ವೀಕ್ಷಣೆಗೆ ತೆರಳಿದ್ದ ಜನ ಪರದಾಡಿದರು. ಬೆಳಿಗ್ಗೆ ನಗರದ ರಸ್ತೆಗಳು ಸ್ವಚ್ಛಗೊಂಡಿದ್ದರೆ ಚರಂಡಿಗಳು, ರಸ್ತೆ ಪಕ್ಕ ಕಸದ ಗುಡ್ಡೆ ಬಿದ್ದಿದ್ದು ಕಂಡು ಬಂದಿತು.
ರಾಯಚೂರಿನಿಂದ ಬೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮನ್ಸಲಾಪುರ ರಸ್ತೆಯಲ್ಲಿ ಭಾರಿ ಗಾತ್ರದ ತಗ್ಗು ಗುಂಡಿಗಳು ಬಿದ್ದಿದರಿಂದ ಮಳೆ ನೀರು ನಿಂತಿದ್ದು, ಲಾರಿ, ಬಸ್, ಆಟೋಗಳು ಗುಂಡಿಗಳಲ್ಲಿ ಸಿಕ್ಕಿ ಬಿದ್ದು ಸಂಚಾರ ವ್ಯವಸ್ಥೆ ಹದಗೆಟ್ಟಿತ್ತು. ಇದರಿಂದ ಕೆಲ ಹೊತ್ತು ಟ್ರಾಫಿಕ್ ಜಾಮ್ ಆಗಿದ್ದರಿಂದ ಬೆಳಿಗ್ಗೆ ಬಸ್ನಲ್ಲಿ ದೂರದ ಊರುಗಳಿಗೆ ಹೋಗುವ ಜನ ತೊಂದರೆ ಪಟ್ಟರು. ನಗರದೊಳಗೆ ಸರಕು ಹೊತ್ತು ಬರುವ ಲಾರಿಗಳು ರಸ್ತೆ ಬಿಟ್ಟು ಕದಲದಂತಾಗಿದ್ದು ಕಂಡು ಬಂದಿತು.
ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೆ ಜಿಲ್ಲೆಯ ವಿವಿಧ ಕಡೆ ಸುರಿದ ಮಳೆಯ ವಿವರ ಇಂತಿದೆ.
ಜಿಲ್ಲೆಯಲ್ಲಿ ಗರಿಷ್ಠ ಮಳೆ ಸಿಂಧನೂರು ತಾಲ್ಲೂಕಿನ ಗುಂಜಳ್ಳಿಯಲ್ಲಿ 46.ಮಿ.ಮಿ ಮಳೆಯಾಗಿದೆ. ಕನಿಷ್ಠ ದೇವದುರ್ಗದಲ್ಲಿ 0.5 ಮಿ.ಮಿ ಮಳೆಯಾಗಿದೆ.
ರಾಯಚೂರು ತಾಲ್ಲೂಕು: ರಾಯಚೂರು– 23 ಮಿ.ಮಿ, ಯರಮರಸ್–1.8, ಯರಗೇರಾ–14, ಗಿಲ್ಲೇಸುಗೂರು–12.5, ಕಲ್ಮಲಾ 13, ಚಂದ್ರಬಂಡಾ–2.
ಮಾನ್ವಿ ತಾಲ್ಲೂಕು: ಮಾನ್ವಿ–7.2 ಮಿ.ಮಿ, ಕುರ್ಡಿ–10.2, ಕಲ್ಲೂರು– 7 ಮಿ.ಮಿ, ಸಿರವಾರ–28.4, ಮಲ್ಲಟ–11, ಕುರಕುಂದಾ–12, ಕವಿತಾಳ–7, ಪಾಮನಕಲ್ಲೂರು–2.2, ರಾಜಲಬಂಡಾ–8, ಹಾಲಾಪುರ–9 ಮಿ.ಮಿ ಮಳೆಯಾಗಿದೆ.
ದೇವದುರ್ಗ ತಾಲ್ಲೂಕು: ದೇವದುರ್ಗ–0.5, ಗಬ್ಬೂರು–6.2, ಜಾಲಹಳ್ಳಿ–8.5
ಲಿಂಗಸುಗೂರು ತಾಲ್ಲೂಕು: ಮಸ್ಕಿ– 4.4, ಮುದಗಲ್–5.2 ಮಿ.ಮಿ ಮಳೆಯಾಗಿದೆ.
ಸಿಂಧನೂರು ತಾಲ್ಲೂಕು: ಸಿಂಧನೂರು 17.2, ಜವಳಗೇರ– 7.8, ಸಾಲಗುಂದ–22.6, ಬಳಗಾನೂರು–7, ಗುಡದೂರು–7.2,
ತುರವಿಹಾಳ–31.6, ವಲ್ಕಂದಿನ್ನಿ 12.6, ಗುಂಜಳ್ಳಿ–46, ಜಾಲೀಹಾಳ–42.2, ಹೆಡಗಿನಾಳ–10.2 ಮಿ.ಮಿ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.