ಕುದೂರು: ಸೋಲೂರು ಹೋಬಳಿಯ ಲಕ್ಕೇನಹಳ್ಳಿ ಗ್ರಾಮದ ಸಮೀಪ ಶನಿವಾರ ರಾತ್ರಿ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಲಕ್ಕೇನಹಳ್ಳಿ ಡೇರಿ ಅಧ್ಯಕ್ಷ, ವಿಎಸ್ಎಸ್ಎನ್ ನಿರ್ದೇಶಕ ಹನುಮಂತರಾಜು (38) ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ನಲ್ಲಿ ಮಕ್ಕಳಿಗೆ ಪಾನಿಪುರಿ ತೆಗೆದುಕೊಂಡು ಹನುಮಂತರಾಜು ಲಕ್ಕೇನಹಳ್ಳಿ ಗ್ರಾಮದ ಕಡೆ ಬರುವಾಗ ಅಪಘಾತ ಸಂಭವಿಸಿದೆ. ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು.
ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಲಕ್ಕೇನಹಳ್ಳಿಯ ಜಮೀನಿನಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಯಿತು. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.