ಹಾರೋಹಳ್ಳಿ: ಗ್ರಾಮಿಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಾಲೂಕಿನ ಹಲವು ಗ್ರಾಮಿಣ ಭಾಗಗಳಿಗೆ ಹೆಚ್ಚುವರಿ ಬಸ್ ಸಂಚಾರ ಆರಂಭಿಸಲಾಗಿದೆ.
ಗ್ರಾಮೀಣ ಭಾಗದಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಹಾರೋಹಳ್ಳಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ಸಚಿನ್ ಹೊಸದಾಗಿ ಬಸ್ ಸಂಚಾರ ಆರಂಭಿಸಿದ್ದಾರೆ.
ವಿದ್ಯಾರ್ಥಿಗಳ ಶಾಲೆ, ಕಾಲೇಜಿನ ಸಮಯಕ್ಕೆ ಅನುಕೂಲವಾಗುವಂತೆ ಹಾರೋಹಳ್ಳಿ - ಕನಕಪುರ ಮಾರ್ಗವಾಗಿ ಬೆಳಗ್ಗೆ 5ಕ್ಕೆ ಮತ್ತು ಸಂಜೆ 4ಕ್ಕೆ ಶಟಲ್ ಬಸ್ ಸಂಚಾರ ಆರಂಭಿಸಲಾಗಿದೆ.
ಅಲ್ಲದೇ ತಾಲೂಕಿನ ಗಡಿ ಭಾಗಗಳಾದ ಯಲಚವಡಿ, ಗಿಣಗಿದೊಡ್ಡಿ, ಹನುಮಂತನದೊಡ್ಡಿ, ಯಲವನಾಥ ಹಾಗೂ ಹಾರೋಹಳ್ಳಿ ಸಾದೇನಹಳ್ಳಿ ಅಗರ ಮಾರ್ಗವಾಗಿ ಬಸ್ ಸಂಚಾರ ಆರಂಭಿಸಲಾಗಿದೆ.
ಕೆಲವು ಗ್ರಾಮಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮುಗಿದ ನಂತರ ಮುಂದಿನ ಒಂದು ವಾರದೊಳಗೆ ಚೀಲೂರು ಟಿ.– ಹೊಸಹಳ್ಳಿ ಮಾರ್ಗವಾಗಿ ಬಸ್ ಸಂಚಾರ ಆರಂಭಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಅಲ್ಲದೇ ಜಕ್ಕಸಂದ್ರ ಗ್ರಾಮದಲ್ಲಿ ವೇಗದೂತ ನಿಲುಗಡೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.