ಚನ್ನಪಟ್ಟಣ: ಗ್ರಾಮೀಣ ಪ್ರದೇಶದಲ್ಲಿ ಜನರ ನಡುವೆ ಸೌಹಾರ್ದ ಬೆಳೆಯಲು ಕ್ರೀಡಾಕೂಟಗಳು ಸಹಕಾರಿಯಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಎಸ್ಎಸ್ಆರ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ಗ್ರಾಮಾಂತರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬುಧವಾರ ಸಮಾರೋಪದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಿದೆ. ಇದರ ಜೊತೆಗೆ ಗ್ರಾಮ ಗ್ರಾಮಗಳ ಜನರು ಸೌಹಾರ್ದ ಬಾಂಧವ್ಯ ಹೊಂದಲು ಪಂದ್ಯಾವಳಿಗಳು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಇಂತಹ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಸೌಹಾರ್ದ ಭಾವ ಬೆಳೆಯಲು ಮುಂದಾಗಬೇಕು ಎಂದರು.
ಗ್ರಾಮದ ಮುಖಂಡ ಬಿ.ಕೆ ಮಧುಸೂದನ್ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕರಿಗೆ ಪ್ರೋತ್ಸಾಹ ಸಿಕ್ಕರೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ವೇದಿಕೆ ಸಿಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಬ್ಬಡ್ಡಿ, ಕ್ರಿಕೆಟ್, ವಾಲಿಬಾಲ್ ನಂತಹ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜನೆ ಮಾಡಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ಪಂದ್ಯಾವಳಿಯಲ್ಲಿ ಹೊಂಬೇಗೌಡನದೊಡ್ಡಿಯ ಯುವಕರ ತಂಡ ಪ್ರಥಮ ಬಹುಮಾನ ಪಡೆದು ₹ 33,333 ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಬೇವೂರು ಗ್ರಾಮದ ಯುವಕರ ತಂಡ ದ್ವಿತೀಯ ಬಹುಮಾನ ಪಡೆದು ₹ 22,222, ಮಾಗನೂರು ಗ್ರಾಮದ ತಂಡ ತೃತೀಯ ಸ್ಥಾನ ಪಡೆದು ₹ 4,444, ಮೊಟ್ಟೇಗೌಡನದೊಡ್ಡಿ ಗ್ರಾಮದ ತಂಡ ನಾಲ್ಕನೇ ಬಹುಮಾನ ಪಡೆದು ₹ 2,222 ಪಡೆದುಕೊಂಡರು.
ಗ್ರಾಮದ ಮುಖಂಡ ಮಹೇಶ್, ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ನಿರ್ದೇಶಕ ಶಿವಕುಮಾರ್, ರೈತ ಮುಖಂಡ ಶಿವಮಾದು, ಮುಖಂಡರಾದ ನಂದೀಶ್, ಸುನಿಲ್, ಕ್ರೀಡಾಕೂಟದ ವ್ಯವಸ್ಥಾಪಕರಾದ ಅರುಣ್ ಕುಮಾರ್, ಸತೀಶ್, ಅಭಿಷೇಕ್, ಜಿತೇಂದ್ರ ಕುಮಾರ್ ಹಾಜರಿದ್ದರು.
ಗ್ರಾಮದಲ್ಲಿ ಇತ್ತೀಚಿಗೆ ನಿಧನರಾದ ದಿವಗಂತ ಸಹದೇವ, ಬಿ.ಎಸ್. ಮಧು, ಪುನೀತ್ ಕುಮಾರ್, ಬಿ.ಟಿ. ರಾಘವೇಂದ್ರ, ಅಜಿತ್, ಬಿ.ಆರ್. ದಿನೇಶ್, ನಂಜೇಗೌಡ ಅವರ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು.