ಬಿಡದಿ (ರಾಮನಗರ): ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸೋಮವಾರ ರಕ್ತದಾನ ಶಿಬಿರ ನಡೆಯಿತು.
ಕರಿಯಪ್ಪನದೊಡ್ಡಿ ಸಮೀಪವಿರುವ ಮುತ್ತಪ್ಪ ರೈ ನಿವಾಸದ ಆವರಣದಲ್ಲಿ ಬೆಳ್ಳಿ ರಕ್ತನಿಧಿ ಸಹಯೋಗದೊಂದಿಗೆ ನಡೆದ ಶಿಬಿರದಲ್ಲಿ ಹತ್ತಾರು ಜನರು ರಕ್ತದಾನ ಮಾಡಿದರು. ಸಂಘಟನೆಯ ರಾಜ್ಯ ವಕ್ತಾರ ಪ್ರಕಾಶ್ ರೈ ಮಾತನಾಡಿ, ಮುತ್ತಪ್ಪ ಅವರ ಪುಣ್ಯಸ್ಮರಣೆಯ ದಿನ ಸಮಾಜಕ್ಕೆ ನೆರವಾಗುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸಂಘಟನೆಯ ರಾಜ್ಯ ಅಧ್ಯಕ್ಷ ಬಿ.ಎನ್. ಜಗದೀಶ್ ಮಾತನಾಡಿ, ಇದೇ 18ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುತ್ತಪ್ಪ ರೈ ಅವರ ಜೀವನ ಚರಿತ್ರೆ ಕೃತಿ ಬಿಡುಗಡೆ ಆಗಲಿದೆ. ಅತ್ಯಂತ ಕುತೂಹಲಕಾರಿ ವಿಚಾರಗಳು ಈ ಪುಸ್ತಕದಲ್ಲಿವೆ ಎಂದರು.
ಶಿಬಿರದಲ್ಲಿ 40ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಇದಕ್ಕೂ ಮುನ್ನ ಬಿಡದಿ ಪಟ್ಟಣದಲ್ಲಿ ಮುತ್ತಪ್ಪ ರೈ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ರೈ ದಂಪತಿಯ ಸಮಾಧಿಗೆ ಕಾರ್ಯಕರ್ತರು ಪೂಜೆ ಸಲ್ಲಿಸಿದರು.
ಸಂಘಟನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ರಾಮಚಂದ್ರಯ್ಯ, ಉಪಾಧ್ಯಕ್ಷ ಸತೀಶ್ಗೌಡ, ಪ್ರಧಾನ ಕಾರ್ಯದರ್ಶಿ ರಜತ್ ಗಗನ್ ರಾಜ್, ರಾಮನಗರ ಜಿಲ್ಲಾ ಅಧ್ಯಕ್ಷ ಕೆ.ರವಿ, ಪದಾಧಿಕಾರಿಗಳಾದ ಯೋಗಾನಂದ್, ಮಂಜುಳಾ, ನಿಸಾ, ವಿಜಯ, ರತ್ನಮ್ಮ, ನಾರಾಯಣಸ್ವಾಮಿ ಮತ್ತಿತರರು ಇದ್ದರು.