ಚನ್ನಪಟ್ಟಣ: ಜಿ.ಪಿ. ರಾಜರತ್ನಂ ಅವರ ಜೀವನ ದೃಷ್ಟಿ, ವಿಡಂಬನಾತ್ಮಕ ಧೋರಣೆಗಳು, ಮಾತೃಭಾಷಾ ಪ್ರೇಮ, ಅಲ್ಪತೃಪ್ತಿ ಇವುಗಳು ಅವರನ್ನು ಮಹಾ ದಾರ್ಶನಿಕರನ್ನಾಗಿ ಮಾಡಿವೆ ಎಂದು ಲೇಖಕ ವಿಜಯ್ ರಾಂಪುರ ತಿಳಿಸಿದರು.
ನಗರದ ಮಂಜುನಾಥ ಬಡಾವಣೆಯಲ್ಲಿ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಾಹಿತಿ ಜಿ.ಪಿ. ರಾಜರತ್ನಂ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ರತ್ನನಪದ ಸೇರಿದಂತೆ ಹಲವಾರು ಅಮೂಲ್ಯ ಕೃತಿಗಳನ್ನು ನೀಡಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಭಾಷಾ ಪ್ರೇಮ ಮೆರೆಯುವ ಹಾಗೂ ಇಂದಿಗೂ ಹಸಿರಾಗಿರುವ 'ರತ್ನನ ಪದಗಳು' ಅವರ ಮಾತೃಭಾಷಾ ಪ್ರೇಮಕ್ಕೊಂದು ಅತ್ಯುತ್ತಮ ಸಾಕ್ಷಿ. ರಾಮನಗರ ಜಿಲ್ಲೆಯವರಾದ ರಾಜರತ್ನಂ ಅವರ ಹೆಸರಿನಲ್ಲಿ ಕನಿಷ್ಟ ಸಾಹಿತ್ಯ ಭವನವನ್ನು ಜಿಲ್ಲೆಯಲ್ಲಿ ನಿರ್ಮಿಸುವ ಔದಾರ್ಯವನ್ನು ಮರೆತಿರುವ ಜಿಲ್ಲಾಡಳಿತ ಇನ್ನಾದರೂ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಯುವ ಕವಿ ಅಬ್ಬೂರು ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದ ಒಲವು ಬೆಳೆಸಿಕೊಂಡು, ಕನ್ನಡ ಪ್ರೇಮ ಮೆರೆದ ಜಿ.ಪಿ. ರಾಜರತ್ನಂ ಕನ್ನಡದ ಕಲಿ. ಮೌಲಿಕವೂ, ಜನಪ್ರಿಯವೂ ಆದ ಸಾಹಿತ್ಯವನ್ನು ಸೃಷ್ಟಿಸಿದ ಶ್ರೀಯುತರ ಸಾಹಿತ್ಯ ಕೊಡುಗೆ ಅಪಾರ ಎಂದರು.