ಕನಕಪುರ: ’ಮಾರ್ಷಲ್ ಆರ್ಟ್ಸ್ ಕರಾಟೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು‘ ಎಂದು ಪುರ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಂತರಾಮ್ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಏರ್ಪಡಿಸಿದ್ದ ಎರಡನೇ ರಾಜ್ಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್ ಶಿಪ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
’ಆತ್ಮರಕ್ಷಣೆಗಾಗಿ ಇಂದು ಪ್ರತಿ ಮಗುವು ಕರಾಟೆ ಕಲಿಯಬೇಕಿದೆ. ಇದರಿಂದ ಉತ್ತಮ ಆರೋಗ್ಯ, ದೇಹ ಬೆಳವಣಿಗೆಗೆ ಸಹಕಾರಿಯಾಗಲಿದೆ‘ ಎಂದರು.
ಕೋಡಿಹಳ್ಳಿ ಸಬ್ ಇನ್ಸ್ಪೆಕ್ಟರ್ ಸಿ.ಕೃಷ್ಣಕುಮಾರ್ ಮಾತನಾಡಿ, ’ಕರಾಟೆ ಕಲಿಯುವ ಮಕ್ಕಳು ಜೀವನದಲ್ಲಿ ಅತ್ಯಂತ ಶಿಸ್ತನ್ನು ಅಳವಡಿಸಿಕೊಂಡಿರುತ್ತಾರೆ.ಶಿಕ್ಷಣದ ಜತೆಗೆ ಕರಾಟೆ ಕಲಿಯಬೇಕು. ಇದು ಜೀವನದಲ್ಲಿ ತುಂಬ ಉಪಯೋಗಕ್ಕೆ ಬರುತ್ತದೆ‘ ಎಂದು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 230 ಕ್ರೀಡಾಪಟುಗಳು ಭಾಗವಹಿಸಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಸಮೂಹ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಶ್ರೀನಿವಾಸಮೂರ್ತಿ, ರಾಮನಗರ ವುಶು ಸಂಸ್ಥೆಯ ಕಾರ್ಯದರ್ಶಿ ಹೊನ್ನಗಂಗಪ್ಪ, ಮಾರ್ಷಲ್ ಆರ್ಟ್ಸ್ ಅಕಾಡೆಮಿ ನಿರ್ದೇಶಕಿ ಪುಷ್ಪಾವತಿ ಇದ್ದರು.
ರಾಮನಗರ ಅನಿಕೇತನ ತಂಡಕ್ಕೆ ಪ್ರಥಮ ಸ್ಥಾನ, ಬೆಂಗಳೂರಿನ ಬೃಂದಾವನ ತಂಡಕ್ಕೆ ದ್ವಿತೀಯ ಸ್ಥಾನ, ಹಾಸನದ ಎಜುಕೇರ್ ತಂಡ ತೃತೀಯ ಸ್ಥಾನ ಪಡೆದಿವೆ.