ಕುದೂರು: 63/11 ಕೆವಿ ವಿದ್ಯುತ್ ಪರಿವರ್ತಕ ಪಡೆಯಲು ₹6 ಸಾವಿರ ಲಂಚಕ್ಕೆ ಕಡೆಗೆ ₹4 ಸಾವಿರ ಹಣ ಪಡೆಯುವಾಗ ಪಟ್ಟಣದ ಬೆಸ್ಕಾಂ ಇಲಾಖೆಯ ಸ್ಟೋರ್ ಕೀಪರ್ ಯೋಗಾನಂದ್ ರಾಮನಗರ ಲೋಕಾಯುಕ್ತರ ಬಲೆಗೆ ಶುಕ್ರವಾರ ಬಿದ್ದಿದ್ದಾರೆ.
ಏಪ್ರಿಲ್ 1 ರಂದು ವಿದ್ಯುತ್ ಪರಿವರ್ತಕಕ್ಕಾಗಿ ಕುದೂರು ಬೆಸ್ಕಾಂ ಇಲಾಖೆಯ ಎಇಇ ಅರಿಗೆ ಕೋರಿಕೆ ಪತ್ರವನ್ನು ಬೆತ್ತರಹಳ್ಳಿಯ ಪುರುಷೋತ್ತಮ್ ಎಂಬುವವರು ಕೊಟ್ಟಿದ್ದರು. ಈ ವೇಳೆ ಸ್ಟೋರ್ ಕೀಪರ್ ಯೋಗಾನಂದ್ ₹6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಏಪ್ರಿಲ್ 5 ರಂದು ಪುರುಷೋತ್ತಮ್, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಆರೋಪಿ ಯೋಗಾನಂದ್ ಮನೆಯಲ್ಲಿ ಹಣ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಎಂ.ಆರ್.ಗೌತಮ್ ಮತ್ತು ಎಸ್. ಸುಧೀರ್ ನೇತೃತ್ವದಲ್ಲಿ ದಾಳಿ ನಡೆಯಿತು. ಪೊಲೀಸ್ ಇನ್ಸ್ಪೆಕ್ಟರ್ ಅನಂತರಾಮ್ ಮತ್ತು ಹನುಮಂತ ಕುಮಾರ್ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಪೊಲೀಸರು ರಾತ್ರಿ 8 ರವರೆಗೂ ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ತನಿಖೆ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದರು.
ಕುದೂರು ಪಟ್ಟಣದ ಬೆಸ್ಕಾಂ ಇಲಾಖೆಯ ಮೇಲೆ ರಾಮನಗರ ಲೋಕಾಯುಕ್ತ ಪೊಲೀಸರು ಶುಕ್ರವಾರ ಸಂಜೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದರು