ಚನ್ನಪಟ್ಟಣ: ‘ಹಿತ್ತಲ ಬಾಗಿಲಿನಿಂದ ಯಾರ್ಯಾರೊ ಬಂದು ಸಿ.ಎಂ ಆಗಿದ್ದಾರೆ. ಅಂತಹದ್ದರಲ್ಲಿ ಪಕ್ಷಕ್ಕಾಗಿ ಕಷ್ಟಪಟ್ಟಿರುವ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು. ನಾಳೆಯೇ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವಿಷಯದಲ್ಲಿ ನಾನು ಸದಾ ಅವರ ಪರವಿದ್ದೇನೆ’ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು.
ಬೆಂಗಳೂರು ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಪರವಾಗಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿವಕುಮಾರ್ ಅವರಿಗೆ ಶೇ ನೂರರಷ್ಟು ಸಿ.ಎಂ ಅವಕಾಶವಿದೆ. ಅವರು ಆಗಬೇಕು ಕೂಡ’ ಎಂದು ಅಭಿಪ್ರಾಯಪಟ್ಟರು.
‘ಯಾರ್ಯಾರನ್ನೊ ಸಿ.ಎಂ ಮಾಡಿದ್ದೇವೆ. ನಮ್ಮ ಜಿಲ್ಲೆಯ ಮಗ, ಅದರಲ್ಲೂ ನಮ್ಮವರಾದ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ವೈಯಕ್ತಿಕ ಆಸೆ. ನನ್ನ ಅಥವಾ ಐದಾರು ಮಂದಿಯ ತೀರ್ಮಾನದಿಂದ ಶಿವಕುಮಾರ್ ಮುಖ್ಯಮಂತ್ರಿ ಆಗುವುದಿಲ್ಲ. ಈ ಕುರಿತು ನಿರ್ಧಾರ ಪಕ್ಷ ಹಾಗೂ ಹೈಕಮಾಂಡ್ಗೆ ಬಿಟ್ಟಿದ್ದು’ ಎಂದರು.
‘ಈ ಹೇಳಿಕೆ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿದೆಯೇ’ ಎಂಬ ಪ್ರಶ್ನೆಗೆ, ‘ಸಿದ್ದರಾಮಯ್ಯ ಅವರು ಹೋರಾಟದ ಮೂಲಕ ಮುಖ್ಯಮಂತ್ರಿಯಾಗಿದ್ದಾರೆ. ಉಳಿದ ಎಷ್ಟೋ ಮಂದಿ ಹಿತ್ತಲ ಬಾಗಿಲಿನಿಂದ ಬಂದು ಆ ಹುದ್ದೆಗೇರಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.