ಕನಕಪುರ: ನಗರ ಸೌಂದರ್ಯ ಹಾಗೂ ಸಾರ್ವಜನಿಕರ ವಾಯುವಿಹಾರಕ್ಕಾಗಿ ಇಲ್ಲಿನ ನಗರಸಭೆ ನಿರ್ಮಿಸಿರುವ ಕನಕ–ಕಾವೇರಿ ಉದ್ಯಾನವು ಅರ್ಧ ಹಸುರುನಿಂದ ಕಂಗೊಳಿಸುತ್ತಿದ್ದರೆ, ಇನ್ನರ್ಧ ಅಧ್ವಾನವಾಗಿದೆ.
ಎರಡು ಕಿ.ಮೀ. ಉದ್ದದ ಈ ಉದ್ಯಾನದಲ್ಲಿ ಸುಮಾರು ಒಂದು ಕಿ.ಮೀ. ಉದ್ಯಾನ ಅಭಿವೃದ್ದಿಯಾಗಿದೆ. ಉಳಿದ ಒಂದು ಕಿ.ಮೀ. ಅಭಿವೃದ್ಧಿಯಾಗದೇ ಕಾಮಗಾರಿಗಳು ಬಾಕಿ ಉಳಿದ ಪರಿಣಾಮ ಕಸದ ತೊಟ್ಟಿಯಾಗಿ, ಪಾರ್ಕಿಂಗ್ ತಾಣವಾಗಿ ಮಾರ್ಪಾಟ್ಟಿದೆ.
2012ರಲ್ಲಿ ಕನಕಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಡಿ.ಕೆ. ಶಿವಕುಮಾರ್ ಅವರು ಪಟ್ಟಣಕ್ಕೆ ಸುಸಜ್ಜಿತ ಉದ್ಯಾನ ಬೇಕೆಂಬ ಕನಸು ಕಂಡಿದ್ದರು. ಅದಕ್ಕೆ ತಕ್ಕಂತೆ ಇಲ್ಲಿನ ರಾಮನಗರ ಮುಖ್ಯರಸ್ತೆಯಿಂದ ಮೈಸೂರು ಮುಖ್ಯ ರಸ್ತೆಯ ಮಧ್ಯ ಭಾಗದಲ್ಲಿನ ಸುಮಾರು ಎರಡು ಕಿಲೋ ಮೀಟರ್ ಉದ್ದದ ಪೈಪ್ಲೈನ್ ಜಾಗದಲ್ಲಿ ಉದ್ಯಾನ ನಿರ್ಮಾಣಕ್ಕೆ ಮೀಸಲಿರಿಸಿದ್ದರು. 2012ರಲ್ಲಿಯೇ ಅಂದಿನ ಕಾನೂನು ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದ ಸುರೇಶ್ ಕುಮಾರ್ ಅವರಿಂದ ಉದ್ಯಾನ ಕಾಮಗಾರಿಗೆ ಚಾಲನೆಯೂ ದೊರೆಕಿತ್ತು.
2012ರಿಂದ 2017ರವರೆಗೆ ಸುಮಾರು ಒಂದು ಕಿ.ಮೀ. ಮಾತ್ರ ಅಭಿವೃದ್ಧಿ ಕಂಡಿದ್ದ ಉದ್ಯಾನದಲ್ಲಿ ಅಲ್ಲಲ್ಲಿ ಹಸುರು ಕಂಗೊಳಿಸಿತ್ತಿತ್ತು. ಅದೇ ಸಮದಯಲ್ಲಿ ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಕೈಯಿಂದಲೇ ಈ ಉದ್ಯಾನವನ್ನು ಉದ್ಘಾಟಿಸಲಾಗಿತ್ತು. ಉಳಿದ ಒಂದು ಕಿ.ಮೀ. ಅಭಿವೃದ್ಧಿ ಕಾಮಗಾರಿ ಬಾಕಿ ಉಳಿಸಿದ್ದರೂ ಉದ್ಯಾನಕ್ಕೆ ಉದ್ಘಾಟನೆಯ ಭಾಗ್ಯ ದೊರೆತಿತ್ತು.
ಅಲ್ಲಿಂದೀಚೆಗೆ ಕನಕ–ಕಾವೇರಿ ಉದ್ಯಾನದ ಅರ್ಧಭಾಗ ಮಾತ್ರ ಅಧ್ವಾನವಾಗಿದೆ. ಅರ್ಧಂಬರ್ಧ ಕಾಮಗಾರಿ ಆಗಿದ್ದ ಉದ್ಯಾನದಲ್ಲಿ ಕೆಲಸಗಳು ಬಾಕಿ ಉಳಿದಿವೆ. ಸುಮಾರು ಒಂದೂವರೆ ಕಿಲೋಮೀಟರ್ ನಷ್ಟು ಮಾತ್ರ ಉದ್ಯಾನ ಪೂರ್ಣಗೊಂಡಿದ್ದು ಇಂಡಿಯನ್ ಸ್ಕೂಲ್ ಮುಬಾಗ, ಮಹದೇಶ್ವರ ಬಡಾವಣೆ ಮುಂಭಾಗ, ಗಂಗೋತ್ರಿ ಸ್ಕೂಲ್ ಮುಂಭಾಗ ಸುಮಾರು 500 ಮೀಟರ್ನಷ್ಟು ಉದ್ಯಾನ ಅಭಿವೃದ್ಧಿಯಾಗದೇ ಹಾಗೇ ಉಳಿದಿದೆ. ಅರ್ಧ ಭಾಗ ಮಾತ್ರ ಸಾರ್ವಜನಿಕರು ವಾಯುವಿಹಾರಕ್ಕೆ ಬಳಸುತ್ತಿದ್ದು, ಉಳಿದರ್ಧ ಭಾಗದ ಕಸವು ಈ ಭಾಗಕ್ಕೂ ಆವರಿಸುವ ಭೀತಿ ವ್ಯಕ್ತಪಡಿಸುತ್ತಿದ್ದಾರೆ.
ಉದ್ಯಾನ ಅಪೂರ್ಣಗೊಂಡಿರುವುದರಿಂದ ಸುತ್ತಲೂ ನಿರ್ಮಾಣ ಮಾಡಿದ್ದ ಕಾಂಪೌಂಡ್ ಅದುಷ್ಕರ್ಮಿಗಳು ನಾಶಗೊಳಿಸಿದ್ದಾರೆ. ಅದರಲ್ಲಿನ ಕಂಬಿಗಳನ್ನು ಕಳ್ಳತನ ಮಾಡಿದ್ದಾರೆ. ಮನೆಯ ತ್ಯಾಜ್ಯ ಮತ್ತು ಕಸವನ್ನು ಉದ್ಯಾನಕ್ಕೆ ತಂದು ಹಾಕುತ್ತಿದ್ದಾರೆ. ಗಿಡಗಂಟೆಗಳು ಬೆಳೆದು ಕಸದ ತೊಟ್ಟಿಯಂತಾಗಿದೆ. ಕಾಂಪೌಂಡ್ ಇಲ್ಲದ ಕಾರಣ ದನಕರುಗಳು ಪಾರ್ಕ್ ಒಳಗೆ ರಾಜಾರೋಷವಾಗಿ ನುಗ್ಗುತ್ತಿವೆ. ಚೆನ್ನಾಗಿರುವ ಕಾಂಪೌಂಡ್ ನಾಶ ಮಾಡಿ ಅದರಲ್ಲೂ ಕಂಬಿಗಳನ್ನೂ ಕಳ್ಳರು ಕದ್ದೊಯ್ದಿದ್ದಾರೆ. 2 ಕಿ.ಮೀ ಉದ್ದದ ಉದ್ಯಾನದಲ್ಲಿ ಎಲ್ಲಿಯೂ ಶೌಚಾಲಯವೇ ಇಲ್ಲ. ಯಾವ ಉದ್ದೇಶಕ್ಕಾಗಿ ಉದ್ಯಾನ ನಿರ್ಮಿಸಲಾಗಿತ್ತೋ ಅದರ ಬದಲಿಗೆ ವಾಹನಗಳ ಪಾರ್ಕಿಂಗ್ ತಾಣವಾಗಿ ಈ ಜಾಗ ಬಳಕೆಯಾಗುತ್ತಿದೆ.
‘ಉದ್ಯಾನಕ್ಕೆ ಸೂಕ್ತ ರಕ್ಷಣೆ ಇಲ್ಲ. ನಾಯಿ, ಹಂದಿ, ದನಕರುಗಳೆಲ್ಲಾ ಒಳನುಗ್ಗುತ್ತಿವೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಮುಖ್ಯವಾಗಿ ಉದ್ಯಾನಕ್ಕೆ ನಿಗದಿತ ಸಮಯದಲ್ಲಿ ಮಾತ್ರ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸುತ್ತಾರೆ ಇಲ್ಲಿನ ಸಾರ್ವಜನಿಕರು.
‘ಈಗ ಬೇಸಿಗೆ ಪ್ರಾರಂಭ ಆಗಿರುವುದರಿಂದ ಉದ್ಯಾನಕ್ಕೆ ನೀರಿನ ಸಮಸ್ಯೆ ಕಾಡಲಾರಂಭಿಸಿದೆ, ನಗರಸಭೆಯವರು ಶಾಶ್ವತವಾಗಿ ನೀರಿನ ಅನುಕೂಲ ಮಾಡಬೇಕು. ದೊಡ್ಡ ಗಿಡಗಳಿಗೆ ಡ್ರಿಪ್ ವ್ಯವಸ್ಥೆ ಮಾಡಬೇಕು. ಪಾರ್ಕಿನ ಒಳಗಡೆ ಹಾಕಿರುವ ಲೈಟ್ಗಳನ್ನು ರಿಪೇರಿ ಮಾಡಿಸಬೇಕು. ಇವೆಲ್ಲವು ಆದಾಗ ಉದ್ಯಾನ ಪೂರ್ಣಗೊಂಡು ಅದರ ನಿರ್ಮಾಣದ ಉದ್ದೇಶವು ಈಡೇರಿದಂತಾಗುತ್ತದೆ’ ಎನ್ನುತ್ತಾರೆ ವಾಯುವಿಹಾರಿಗಳು.
ಒಳ್ಳೆಯ ಉದ್ದೇಶದಿಂದ ಮಾಡಿರುವ ಪಾರ್ಕನ್ನು ನಗರಸಭೆಯವರು ಪೂರ್ಣಗೊಳಿಸಿ ಸುತ್ತಲೂ ಭದ್ರತೆ ಮಾಡಿ ನಿಗಧಿತ ಸಮಯಕ್ಕೆ ಮಾತ್ರ ಪ್ರವೇಶ ನೀಡಿ ಒಳ್ಳೆಯ ರೀತಿಯಲ್ಲಿ ನಿರ್ವಹಣೆ ಮಾಡಬೇಕು, ಆಗ ಮಾತ್ರ ಪಾರ್ಕಿನ ಉದ್ದೇಶ ಈಡೇರುತ್ತದೆ, ಅದರಿಂದ ಜನಕ್ಕೂ ಉಪಯೋಗ ಆಗುತ್ತದೆ, ನಗರಕ್ಕೂ ಸೌಂದರ್ಯ ಹೆಚ್ಚುತ್ತದೆ, ಆ ನಿಟ್ಟಿನಲ್ಲಿ ನಗರಸಭೆ ಕಾರ್ಯೋನ್ಮುಖ ಆಗಲಿ ಎಂಬುದು ನಮ್ಮ ಆಶಯ.
ಕೋಟ್: ಅಭಿವೃದ್ಧಿಯಾಗಿರುವ ಪಾರ್ಕನ್ನು ನಿರ್ವಹಣೆ ಮಾಡುತ್ತಿದ್ದೇವೆ, ಆದರೆ ಪಕ್ಕದಲ್ಲಿ ಖಾಲಿ ಇರುವ ಜಾಗದಿಂದ ಜಾನುವಾರುಗಳು ಬರುತ್ತದೆ, ಕೆಲವರು ರಾತ್ರಿ ವೇಳೆ ಪಾರ್ಕಿಗೆ ಹಸುಗಳು ಬಿಡುತ್ತಾರೆ, ಇದರಿಂದ ಪಾರ್ಕ್ ಹಾಳಾಗುತ್ತಿದೆ, ಕಿಡಿಗೇಡಿಗಳು ಪಾರ್ಕಿಗೆ ಅಳವಡಿಸಿರುವ ಕಂಬಿಗಳನ್ನು ಕಿತ್ತುಕೊಂಡು ಹೋಗುತ್ತಾರೆ, ಕಾಂಪೌಂಡ್ ಇಲ್ಲದ ಕಾರಣ ಭದ್ರತೆ ಮಾಡುವುದು ಕಷ್ಟವಾಗುತ್ತಿದೆ, ಬೇಸಿಗೆ ಬಂದಿರುವುದರಿಂದ ನೀರಿನ ಕೊರತೆ ಎದುರಾಗಿದೆ, ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿದಾಗ ಚೆನ್ನಾಗಿ ನಿರ್ವಹಣೆ ಆಗುತ್ತದೆ. ವಾಡೆದೊಡ್ಡಿ ಕಬ್ಬಾಳೇಗೌಡ, ಪಾರ್ಕ್ ನಿರ್ವಹಣೆ ಪಡೆದಿರುವವರು.
ಕೋಟ್: ಒಳ್ಳೆಯ ಉದ್ದೇಶದಿಂದ ಪಾರ್ಕ್ ನಿರ್ಮಾಣ ಮಾಡಿದ್ದು ಜನಕ್ಕೂ ಇದರಿಂದ ಉಪಯೋಗ ಆಗುತ್ತಿದೆ, ಪ್ರತಿ ದಿನ ಸಾವಿರಾರು ಜನರು ಇಲ್ಲಿ ವಾಕಿಂಗ್ ಮಾಡುತ್ತಾರೆ. ರೆಸ್ಟ್ ಮಾಡುತ್ತಾರೆ. ಆದರೆ ಅಲ್ಲಲ್ಲಿ ಖಾಲಿ ಬಿಟ್ಟಿರುವುದರಿಂದ ಚೆನ್ನಾಗಿರುವ ಪಾರ್ಕ್ ಹಾಳಾಗುತ್ತಿದೆ.
ಉಳಿಕೆ ಪಾರ್ಕನ್ನು ಅಭಿವೃದ್ಧಿ ಮಾಡಬೇಕು, ಸುತ್ತಲೂ ಕಾಂಪೌಂಡ್ ನಿರ್ಮಿಸಿ ನಿಗಧಿತ ಸಮಯದಲ್ಲಿ ಮಾತ್ರ ಜನರಿಗೆ ಅವಕಾಶ ಕೊಡಬೇಕು, ಇಲ್ಲವಾದಲ್ಲಿ ಎಷ್ಟೇ ನಿರ್ವಹಣೆ ಮಾಡಿದರು ಜನರು ಹಾಳು ಮಾಡುತ್ತಾರೆ. ಕುಮಾರ್, ನಗರದ ನಿವಾಸಿ.
ಕೋಟ್: ಪಾರ್ಕಿನ ಮಧ್ಯದ ರಸ್ತೆಗಳ ಜಾಗವನ್ನು ಇನ್ನೂ ದೊಡ್ಡದಾಗಿ ಬಿಡಬೇಕಿತ್ತು, ಕಿರಿದಾಗಿರುವುದರಿಂದ ವಾಹನಗಳನ್ನು ತಿರುಗಿಸಿಕೊಳ್ಳಲು ಕಷ್ಟವಾಗುತ್ತಿದೆ, ಎರಡು ಬದಿಯಲ್ಲೂ ಕಂಬಿಗಳ ಬದಲಾಗಿ ಮೆಸ್ಗಳನ್ನು ಅಳವಡಿಸಿದರೆ ನಾಯಿಗಳು ಮತ್ತು ಹಸುಗಳು ಬರುವುದಿಲ್ಲ, ಈಗ ಒಳಗೆ ಬಂದು ಪಾರ್ಕ್ ಹಾಳು ಮಾಡುತ್ತಿವೆ. ಕೆಲವು ಕಿಡಿಗೇಡಿಗಳು ಕಾಂಪೌಂಡ್ ಮುರಿದು ಕಂಬಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅದನ್ನು ತಡೆಗಟ್ಟಬೇಕು, ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿ ಸುತ್ತಲೂ ಒಳಗೆ ಬರದಂತೆ ರಕ್ಷಣಾ ಬೇಲಿ ನಿರ್ಮಿಸಿದರೆ ಒಳ್ಳೆಯದು. ಮಂಟೆಸ್ವಾಮಿ, ಕನಕಪುರದ ನಿವಾಸಿ
ಒಂದು ಒಳ್ಳೆಯ ಉದ್ದೇಶದಿಂದ ಕನಕ ಕಾವೇರಿ ಪಾರ್ಕ್ ನಿರ್ಮಾಣ ಮಾಡಲಾಗಿದೆ ಕಾರಣಾಂತರದಿಂದ ಕೆಲವು ಕಡೆ ಪಾರ್ಕ್ ಅಭಿವೃದ್ಧಿ ಆಗದೆ ಬಾಕಿ ಉಳಿದಿತ್ತು ಈಗ 70 ಲಕ್ಷ ವೆಚ್ಚದಲ್ಲಿ ಉಳಿಕೆ ಪಾರ್ಕ್ ಅಭಿವೃದ್ಧಿಗೆ ಟೆಂಡರ್ ಕೊಟ್ಟಿದ್ದೇವೆ ಶೀಘ್ರವಾಗಿ ನಿರ್ಮಾಣ ಮಾಡುತ್ತಾರೆ. ಉದ್ಯಾನವನ ನಮ್ಮದು ಎಂಬ ಭಾವನೆ ಜನಕ್ಕೆ ಬಂದಾಗ ಮಾತ್ರ ಪಾರ್ಕನ್ನು ಸುಂದರವಾಗಿ ಇಡಲು ಸಾಧ್ಯ ಜನರ ತೆರಿಗೆ ಹಣದಲ್ಲಿ ಮಾಡಿರುವ ಪಾರ್ಕ ಜನರು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು. ಯಾರಾದರೂ ಹಾಳು ಮಾಡಿದರೆ ಅದನ್ನು ತಡೆಗಟ್ಟಬೇಕು ಸ್ವಚ್ಚವಾಗಿಟ್ಟು ಕೊಳ್ಳಬೇಕು. ಎಂ.ಎಸ್.ಮಹದೇವು ಆಯುಕ್ತರು ನಗರಸಭೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.