ಚನ್ನಪಟ್ಟಣ: ‘ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಅಂಬಿಕಾ ಹೇಳಿದರು.
ತಾಲ್ಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಜಿಲ್ಲಾ ಕೃಷಿ ಇಲಾಖೆ, ತಾಲ್ಲೂಕು ಕೃಷಿ ಇಲಾಖೆ, ಇಪ್ಕೋ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಕೃಷಿಯಲ್ಲಿ ನ್ಯಾನೊ ಯೂರಿಯಾ ಬಳಕೆ ಮತ್ತು ಡ್ರೋಣ್ ಮೂಲಕ ನ್ಯಾನೊ ಯೂರಿಯಾ ಸಿಂಪಡಣೆ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಲಕ್ಕೆ ತಕ್ಕಂತೆ ರೈತರು ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಳ್ಳಬೇಕು. ಸಾಮಾನ್ಯವಾಗಿ ರೈತರು ತಮ್ಮ ಬೆಳೆಗಳಿಗೆ ಕೀಟನಾಶಕಗಳನ್ನು ಸಿಂಪಡಿಸಲು ಮಾನವ ಬಳಕೆ ಮಾಡುತ್ತಾರೆ. ಇದರಿಂದ ಶ್ರಮ ಹಾಗೂ ಖರ್ಚು ವೆಚ್ಚವೂ ಅಧಿಕವಾಗುತ್ತದೆ. ಹಾಗಾಗಿ ಇದನ್ನು ಕಡಿಮೆ ಮಾಡುವ ಉದ್ದೇಶದಿಂದ ಡ್ರೋಣ್ ಪರಿಚಯ ಮಾಡಿಸುತ್ತಿದ್ದೇವೆ. ಇದರಲ್ಲಿ ಒಂದು ಎಕರೆ ಪ್ರದೇಶಕ್ಕೆ 10 ಲೀಟರ್ ಔಷಧಿಯನ್ನು ಕಡಿಮೆ ಸಮಯದಲ್ಲಿ ಸುಲಭವಾಗಿ ಸಿಂಪಡಿಸಬಹುದು ಎಂದರು.
ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಅಪರ್ಣಾ ಮಾತನಾಡಿ, ಈ ಯಂತ್ರವನ್ನು ಖರೀದಿಸಲು ಸಾಕಷ್ಟು ಹಣ ಖರ್ಚಾಗುತ್ತದೆ. ಆದರೆ ರೈತರು ಬಾಡಿಗೆಗೆ ಪಡೆದು ಇದನ್ನು ಬಳಸಿಕೊಳ್ಳಬಹುದು ಎಂದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ರಾಜೇಂದ್ರ ಪ್ರಸಾದ್ ಬೇಸಾಯದಲ್ಲಿ ರೈತರು ಅನುಸರಿಸಬೇಕಾದ ಹಲವಾರು ಆಧುನಿಕ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಇಪ್ಕೋ ಸಂಸ್ಥೆಯ ಪ್ರತಿನಿಧಿ ಲಕ್ಷ್ಮೀಶ್, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಬೊಮ್ಮೇಶ್, ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗ ಹಾಜರಿದ್ದರು.