ಮಾಗಡಿ: ಚುನಾವಣೆಯಲ್ಲಿ ನಿರ್ಭೀತಿಯಿಂದ ಮತಚಲಾಯಿಸಿ ಶಾಂತಿಯುತ ಮತದಾನಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಸರ್ಕಲ್ ಇನ್ಸ್ಪೆಕ್ಟರ್ ರವಿಕುಮಾರ್ ತಿಳಿಸಿದರು.
ಮಂಗಳವಾರ ಬೆಳಿಗ್ಗೆ ಪಟ್ಟಣದ ಪೊಲೀಸ್ ಠಾಣೆ ಆವರಣದಿಂದ ಆರಂಭವಾದ ಸಿಐಎಸ್ಎಫ್ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್ ಪಥಸಂಚಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಂದು ಮತಗಟ್ಟೆ ಬಳಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಮತದಾನಕ್ಕೆ ಅಡ್ಡಿಪಡಿಸುವುದು, ಶಾಂತಿಯುತ ಮತದಾನಕ್ಕೆ ಭಂಗ ತರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮತದಾನಕ್ಕೆ ಅಡ್ಡಿಪಡಿಸುವ ಘಟನೆಗಳು ಕಂಡುಬಂದಲ್ಲಿ ಠಾಣೆಗೆ ತಿಳಿಸುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡಲಾಗುವುದು. ಶಾಂತಿಯುತ ಮತದಾನಕ್ಕೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದರು.
ಸಬ್ ಇನ್ಸ್ಪೆಕ್ಟರ್ ಬಿ.ನಟರಾಜ್ ಚುನಾವಣೆ ಬಂದೋಬಸ್ತ್ ಬಗ್ಗೆ ವಿವರಿಸಿದರು. ಸಿಐಎಸ್ಎಫ್ ಪಡೆಯ ಇನ್ಸ್ಪೆಕ್ಟರ್ ಎನ್.ಕೆ.ಪ್ರಜಾಪತಿ ಹಾಗೂ ಅಧಿಕಾರಿಗಳು ಇದ್ದರು.
ರಾಮರಾಜ ಅರಸ್ ರಸ್ತೆ, ಕಲ್ಯಾಬಾಗಿಲು, ಹಳೆ ಮಸೀದಿ ಮೊಹಲ್ಲಾ, ಹೊಸಪೇಟೆ, ತಿರುಮಲೆ, ಎನ್ಇಎಸ್ ಸರ್ಕಲ್ ಗಳಲ್ಲಿ ಪಥಸಂಚಲನ ನಡೆಯಿತು. ಧ್ವನಿವರ್ಧಕದ ಮೂಲಕ ಚುನಾವಣೆ ನೀತಿ ಸಂಹಿತೆ ಬಗ್ಗೆ ತಿಳಿಸಲಾಯಿತು.
ಅರೆಸೇನಾ ಪಡೆಯ ಯೋಧರು ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದರು. ತಾಲ್ಲೂಕು ಫೊಟೊಗ್ರಾಫರ್ಸ್ ಸಂಘಟನೆ ಸಂಚಾಲಕ ಜಿ.ವೆಂಕಟೇಶ್ ಮತ್ತು ರೂಪೇಶ್ ಕುಮಾರ್ ಅರೆಸೇನಾಪಡೆ ಅಧಿಕಾರಿಗಳನ್ನು ಸನ್ಮಾನಿಸಿದರು.