ರಾಮನಗರ: ಹಠಾತ್ ಬೆಳವಣಿಗೆಯೊಂದರಲ್ಲಿ ಇಲ್ಲಿನ ನಗರಸಭೆ ಅಧ್ಯಕ್ಷೆ ಬಿ.ಎಂ. ಪವಿತ್ರ ಅವರು ಮಂಗಳವಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ವಾರ್ಡ್ 27ರ ಸದಸ್ಯರಾಗಿರುವ ಅವರು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಅವರೊಂದಿಗೆ ಉಪಾಧ್ಯಕ್ಷ ಸೋಮಶೇಖರ್, ದಲಿತ ಮುಖಂಡ ಶಿವಕುಮಾರ ಸ್ವಾಮಿ ಇದ್ದರು.
ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಪವಿತ್ರ ಅವರು, 'ಒಂಬತ್ತು ತಿಂಗಳ ಅವಧಿಗೆ ನನ್ನನ್ನು ಅಧ್ಯಕ್ಷೆಯನ್ನಾಗಿ ಪಕ್ಷದ ಸದಸ್ಯರು ಆಯ್ಕೆ ಮಾಡಿದ್ದರು. ಇದೀಗ ಅವಧಿ ಮುಗಿದಿದೆ. ಬೇರೆಯವರಿಗೆ ಅವಕಾಶ ಕೊಡುವ ಸಲುವಾಗಿ ರಾಜೀನಾಮೆ ಸಲ್ಲಿಸಿದ್ದೇನೆ' ಎಂದರು.
ಪವಿತ್ರ ಅವರಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ 31 ವಿಜಯಕುಮಾರಿ ಅವರು ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನೆನ್ನೆಯಷ್ಟೇ ಪವಿತ್ರ ಅವರ ಅಧ್ಯಕ್ಷತೆಯಲ್ಲಿ ನಗರಸಭೆಯ ಸಾಮಾನ್ಯ ಸಭೆ ನಡೆದಿತ್ತು. ಅದಾದ ಮಾರನೆಯ ದಿನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.