ಹಾರೋಹಳ್ಳಿ: ಸರ್ಕಾರಿ ಭೂಮಿಯನ್ನು ಸಮತಟ್ಟು ಮಾಡಿ ಬಡಾವಣೆ ನಿರ್ಮಿಸಲು ಮುಂದಾಗಿದ್ದ ₹10 ಕೋಟಿ ಬೆಲೆ ಬಾಳುವ 7.12 ಎಕರೆ ಭೂಮಿಯನ್ನು ಕಂದಾಯ ಅಧಿಕಾರಿಗಳು ಸುಪರ್ದಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹಾರೋಹಳ್ಳಿ ತಾಲ್ಲೂಕಿನ ಕರಿಕಲ್ ದೊಡ್ಡಿ ಬಳಿ ಶನಿವಾರ ಭೀಮಸಂದ್ರ ಸರ್ವೆ ನಂ. 60ರಲ್ಲಿ 7 ಎಕರೆ ಸರ್ಕಾರಿ ಭೂಮಿಯನ್ನು ಭೂಗಳ್ಳರು ಸಮತಟ್ಟು ಮಾಡಿ ಬಡಾವಣೆ ನಿರ್ಮಿಸಲು ಹೊರಟಿದ್ದರು. ವಿಷಯ ತಿಳಿದ ಕಂದಾಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಭೂಕಬಳಿಕೆಯನ್ನು ತಡೆದಿದ್ದಾರೆ.
ಆಶ್ರಯ ಯೋಜನೆಗೆ ಮೀಸಲಿರಿಸಿದ್ದ ಜಾಗ: ಕರಿಕಲ್ ದೊಡ್ಡಿ ಬಳಿ ಅಧಿಕಾರಿಗಳು ಸುಪರ್ದಿಗೆ ಪಡೆದಿರುವ ಜಾಗ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಆಶ್ರಯ ಕಲ್ಪಿಸಲು ಮೀಸಲಿರಿದ್ದ ಜಾಗವಾಗಿದೆ. ಇದನ್ನು ಭೂಕಳ್ಳರು ಸಮತಟ್ಟು ಮಾಡಿ ಬಡಾವಣೆ ನಿರ್ಮಿಸಲು ಮುಂದಾಗಿದ್ದು, ಅದನ್ನು ತಡೆದು ಅಕ್ರಮ ಪ್ರವೇಶ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ವಿಜಿಯಣ್ಣ, ರಾಜಸ್ವ ನಿರೀಕ್ಷಕ ಅಶೋಕ್, ಗ್ರಾಮ ಲೆಕ್ಕಾಧಿಕಾರಿ ಸುಷ್ಮಿತಾ, ಸರ್ವೆಯರ್ ಪ್ರಭಾಕರ್ ಅಧಿಕಾರಿಗಳ ತಂಡ ಪಾಲ್ಗೊಂಡಿತ್ತು.
ಸರ್ಕಾರಿ ಭೂಮಿ ರಕ್ಷಣೆ ನಮ್ಮ ಆದ್ಯತೆ. ಆಶ್ರಯ ಯೋಜನೆಗೆ ಮೀಸಲಿರಿಸಿದ್ದ ಜಾಗವನ್ನು ಕೆಲವರು ಸಮತಟ್ಟು ಮಾಡಿ ಬಡಾವಣೆ ನಿರ್ಮಿಸಲು ಯೋಜನೆ ರೂಪಿಸಿದ್ದರು. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಭೂಕಬಳಿಕೆ ತಡೆದಿದ್ದೇವೆ. ಈ ಭೂಮಿಯನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಲಾಗುವುದು. ವಿಜಿಯಣ್ಣ ತಹಶೀಲ್ದಾರ್ ಹಾರೋಹಳ್ಳಿ