ರಾಮನಗರ: ತಾಲ್ಲೂಕಿನ ಕೈಲಾಂಚ ಹಾಲು ಉತ್ಪಾದಕರ ಸಹಕಾರ ಸಂಘದ 11 ನಿರ್ದೇಶಕರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 9 ನಿರ್ದೇಶಕರು ಆಯ್ಕೆಯಾಗಿದ್ದಾರೆ. ಇದರೊಂದಿಗೆ ಸಂಘವು ಜೆಡಿಎಸ್ ತೆಕ್ಕೆಗೆ ಜಾರಿದೆ.
ಜೆಡಿಎಸ್ ಬೆಂಬಲಿತರಾದ ಕೆ.ಎನ್. ಮಂಜುನಾಥ್, ಕೆ.ಸಿ. ಚನ್ನೇಗೌಡ, ಎನ್. ರಮೇಶ್, ರೇಣುಕಾಮೂರ್ತಿ, ಎಸ್. ರಾಜು, ರೇಣುಕಾ ಪ್ರಸಾದ್, ನಾಗಮ್ಮ, ರೇಖಾ ಹಾಗೂ ಪ್ರಕಾಶ್ ಆಯ್ಕೆಯಾದ್ದಾರೆ. ಉಳಿದೆರಡು ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಜಯ ಸಾಧಿಸಿದ್ದಾರೆ. ನೂತನ ಆಡಳಿತ ಮಂಡಳಿಯ ಅಧಿಕಾರಾವಧಿ ಐದು ವರ್ಷ ಇರಲಿದೆ.
ಈ ವೇಳೆ ಮಾತನಾಡಿದ ಸ್ಥಳೀಯ ಜೆಡಿಎಸ್ ಮುಖಂಡ ಆರ್. ಪಾಡುರಂಗ, ‘ಸಂಘವು ಅಭಿವೃದ್ಧಿಯಾದರೆ, ರೈತರು ಅಭಿವೃದ್ಧಿಯಾದಂತೆ. ಗ್ರಾಮ ಸಹ ಪ್ರಗತಿಯತ್ತ ಸಾಗುತ್ತದೆ. ಆ ನಿಟ್ಟಿನಲ್ಲಿ ಸಂಘದ ನೂತನ ಆಡಳಿತ ಮಂಡಳಿಯ ಕಾರ್ಯನಿರ್ವಹಿಸಬೇಕು’ ಎಂದರು.
ಮುಖಂಡರಾದ ನಾಗರಾಜು, ಗಿರೀಶ್, ಶಿವರಾಜು, ಕುಮಾರಸ್ವಾಮಿ, ಕೆ.ಎಲ್. ಸುರೇಶ್, ಮಧು, ಲೋಕೇಶ್, ಧರ್ಮಜಯ, ಶಿವಲಿಂಗಯ್ಯ, ಸಂಜು ಹಾಗೂ ಇತರರು ಇದ್ದರು.