ರಾಮನಗರ: ತಾಲ್ಲೂಕಿನಲ್ಲಿ ಬುಧವಾರ ಮಧ್ಯಾಹ್ನ ರಾಮನಗರ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸಾಧಾರಣ ಮಳೆ ಸುರಿಯಿತು. ಬಿಸಿಲ ಬೇಗೆಯ ಜೊತೆಗೆ ಆಗಾಗ ಮೋಡ ಕವಿದ ವಾತಾವರಣವು ಕಡೆಗೂ ಮಳೆ ತಂದಿತು. ಕೆಲ ದಿನಗಳಿಂದ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಸಂತಸಗೊಂಡಿದ್ದಾರೆ.
ಬೆಳಿಗ್ಗೆ ಕೆಲ ಹೊತ್ತು ಇದ್ದ ಮೋಡ ಕವಿದ ವಾತಾವರಣವಿತ್ತು. ನಂತರ ಆವರಿಸಿಕೊಂಡಿದ್ದ ಬಿಸಿಲು ಮಾಯವಾಗಿ ಮಧ್ಯಾಹ್ನ 3.30ರ ಸುಮಾರಿಗೆ ಕೆಲ ನಿಮಿಷ ಸಾಧಾರಣ ಮಳೆ ಸುರಿಯಿತು. ನಂತರ ಸಂಜೆ 5 ಗಂಟೆ ಸುಮಾರಿಗೆ ಮತ್ತೊಮ್ಮೆ ಕೆಲ ನಿಮಿಷ ಮಳೆಯಾಯಿತು.
ಮಳೆಯಿಂದಾಗಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು. ಕೆಲವರು ರಸ್ತೆ ಬದಿಯ ಕಟ್ಟಡಗಳ ಬಳಿ ನಿಂತು ಆಶ್ರಯ ಪಡೆದರೆ, ಉಳಿದವರು ನೆನೆದುಕೊಂಡೇ ಮಳೆಯನ್ನು ಆನಂದಿಸಿಕೊಂಡು ನಡೆದುಕೊಂಡು ಹೋದರು. ಮಳೆ ಇಲ್ಲದೆ ಮೂಲೆ ಸೇರಿದ್ದ ಛತ್ರಿಗಳ ಸಹ ಅಲ್ಲಲ್ಲಿ ಕಣ್ಣಿಗೆ ಕಂಡವು.