ಘಟನೆ ವಿವರ: ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ ರವಿ ರೇಷ್ಮೆ ಬೆಳೆಯಲು ತೀರ್ಮಾನಿಸಿ ಚೌಕಸಂದ್ರದಲ್ಲಿ ಎರಡು ಎಕರೆ ರೇಷ್ಮೆ ತೋಟ ಮತ್ತು ರೇಷ್ಮೆ ಹುಳು ಮನೆ ಬಾಡಿಗೆ ಪಡೆದಿದ್ದ.
ತಾನು ಸಾಲ ಪಡೆದಿದ್ದ ₹20 ಸಾವಿರ ಮರಳಿ ಕೊಡುವುದಾಗಿ ಹೇಳಿ ಮಂಗಳವಾರ ಬೆಳಗ್ಗೆ ಸುನಂದಮ್ಮ ಅವರನ್ನು ರೇಷ್ಮೆ ತೋಟದ ಮನೆಗೆ ಕರೆಸಿಕೊಂಡಿದ್ದಾನೆ. ನಂತರ ಕೊಲೆ ಮಾಡಿ ಶವವನ್ನು ರೇಷ್ಮೆ ಹುಳು ಮನೆಯಲ್ಲಿ ಬಿಟ್ಟು ಕನಕಪುರಕ್ಕೆ ತೆರಳಿದ್ದಾನೆ. ನಂತರ ರಾತ್ರಿ ಬಂದು ತೋಟದಲ್ಲಿ ಗುಂಡಿ ತೋಡಿ ಹೂತಿದ್ದಾನೆ.
ತೋಟದ ಗುಂಡಿಯಲ್ಲಿ ಶವ ಸಿಕ್ಕಿರುವ ಈ ವಿಷಯ ತಿಳಿಯುತ್ತಿದ್ದಂತೆಯೇ ಆರೋಪಿ ರವಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವವನ್ನು ಕನಕಪುರ ತಹಶೀಲ್ದಾರ್ ಡಾ.ಸ್ಮಿತಾ ರಾಮ್ ಸಮ್ಮುಖದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಸಂಜೆ ಹೊರ ತೆಗೆದರು. ಶವವನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಗುರುವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಮೈಮೇಲಿದ್ದ ಆಭರಣಕ್ಕಾಗಿ ಕೊಲೆ ಶಂಕೆ
ಸಾಲದ ಹಣ ಮರಳಿಸಲಾಗದೆ ಆರೋಪಿಯು ಸುನಂದಮ್ಮ ಅವರನ್ನು ಕೊಲೆ ಮಾಡಿರಬಹುದು ಎಂದು ಸಂಬಂಧಿಕರು ಶಂಕಿಸಿದ್ದರು. ಆದರೆ, ಸುನಂದಮ್ಮಮೈ ಮೇಲಿದ್ದ 50 ಗ್ರಾಂ ಚಿನ್ನಾಭರಣ ಕಾಣೆಯಾಗಿವೆ. ಈ ವಿಷಯ ಗೊತ್ತಾದ ನಂತರ ಆಭರಣಗಳಿಗಾಗಿಯೇ ಆತ ಕೊಲೆ ಮಾಡಿರಬಹುದು ಎಂದು ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ರೇಷ್ಮೆ ತೋಟದ ಗುತ್ತಿಗೆ ಅವಧಿ ಸೋಮವಾರಕ್ಕೆ ಮುಕ್ತಾಯವಾಗಿತ್ತು. ಜಮೀನು ಮಾಲಿಕರಿಗೆ ಮಂಗಳವಾರ ಕರೆ ಮಾಡಿದ್ದ ಆರೋಪಿಯು ಮುಂದಿನ ಅವಧಿಗೆ ಗುತ್ತಿಗೆ ಹಣ ನೀಡಿ ತಾನೇ ತೋಟದ ಗುತ್ತಿಗೆ ಪಡೆಯುವುದಾಗಿ ಹೇಳಿದ್ದ ಎಂದು ತಿಳಿದು ಬಂದಿದೆ.