ಹಾರೋಹಳ್ಳಿ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಳಕಮಲೆ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಗುಳಕಮಲೆ ಗ್ರಾಮದ ರವಿಕುಮಾರ್ (26) ಎಂದು ಗುರುತಿಸಲಾಗಿದೆ. ರವಿಕುಮಾರ್ ಈ ಹಿಂದೆ ಬೆಂಗಳೂರಿನಲ್ಲಿ ಆಟೋ ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಆಟೋವನ್ನು ಮಾರಿ ಗ್ರಾಮಕ್ಕೆ ಹಿಂತಿರುಗಿದ್ದ ಅವರು, ಕೆಲಸ ಹುಡುಕಿಕೊಂಡು ಬರುತ್ತೇನೆಂದು ಮನೆಯಿಂದ ಆಚೆ ಬಂದಿದ್ದಾನೆ.
ಈ ವೇಳೆ ರವಿಕುಮಾರ್ ಮನೆಗೆ ಬಂದ ಆರೋಪಿಗಳು, ಎಲ್ಲಿ ಅವನು? ಜಗಳ ಮಾಡಿದ್ದಾನೆ ಇವತ್ತು ಒಂದು ಗತಿ ಕಾಣಿಸುತ್ತೇವೆ ಎಂದು ರವಿಕುಮಾರ್ ತಾಯಿ ಬಳಿ ಹೇಳಿದ್ದಾರೆ.
ರವಿಕುಮಾರ್ ತಾಯಿ ಎಲ್ಲರನ್ನೂ ಗದರಿ ಜಗಳ ಎಲ್ಲಾ ಬೇಡ ಎಂದು ಹೇಳಿ ಕಳುಹಿಸಿದ್ದಾರೆ. ಈ ವೇಳೆ ಜಗ್ಗದ ಆರೋಪಿಗಳು ರಾತ್ರಿ 11ಘಂಟೆವರೆಗೂ ರವಿಕುಮಾರ್ ಬರುವುದನ್ನೇ ಕಾದು ಕುಳಿತು ಬೈಕಿನಲ್ಲಿ ಬರುತ್ತಿದ್ದ ರವಿಕುಮಾರ್ ಅವರನ್ನು ಅಡ್ಡಗಟ್ಟಿ ಕುತ್ತಿಗೆ, ಕಿವಿ ಭಾಗಕ್ಕೆ ಇರಿದು ಪರಾರಿಯಾಗಿದ್ದಾರೆ. ಕಣ್ಣ ಮುಂದೆಯೇ ಮಗನನ್ನು ಇರಿಯುತ್ತಿದ್ದುದನ್ನು ಕಂಡ ತಾಯಿ ಓಡೋಡಿ ಬಂದು ಆರೋಪಿಯೊಬ್ಬನನ್ನು ಹಿಡಿದುಕೊಳ್ಳಲು ಯತ್ನಿಸಿದ್ದಾರೆ. ಆದರೂ ಅವರನ್ನು ತಳ್ಳಿ ಕಾಂಪೌಡ್ ಹಾರಿ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಗಾಯಗೊಂಡಿದ್ದ ಬಿದ್ದಿರುವ ಮಗನನ್ನು ಗ್ರಾಮಸ್ಥರ ಸಹಾಯ ಪಡೆದು ಆಟೋ ಮೂಲಕ ಕಗ್ಗಲೀಪುರ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ವೇಳೆ ವೈದ್ಯರು ಪರಿಶೀಲಿಸಿ ರವಿಕುಮಾರ್ ಸಾವನ್ನಪ್ಪಿರುವುದಾಗಿ ಧೃಢಪಡಿಸಿದ್ದಾರೆ.
ಕೊಲೆ ಸಂಬಂಧ ತಿಮ್ಮರಾಜ, ಆಂಜಿನಿ, ಹೇಮಂತ, ಬೆಂಗಳೂರು ನಿವಾಸಿ ಬಾಬು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರವಿಕುಮಾರ್ ತಾಯಿ ಕಗ್ಗಲೀಪುರ ಪೊಲೀಸರಿಗೆ ದೂರು ನೀಡಿದ್ದಾರೆ.