ಕನಕಪುರ: ‘ಕ್ಷೌರಿಕ ಸಮಾಜವನ್ನು ತೀರ ನಿಕೃಷ್ಟ ಹಾಗೂ ತಿರಸ್ಕಾರದಿಂದ ನೋಡುತ್ತಿದ್ದ ಸಮಯದಲ್ಲಿ, ಬಸವಣ್ಣನವರು ಹಡಪದ ಅಪ್ಪಣ್ಣ ಅವರನ್ನು ಗುರುತಿಸಿ, ತಮ್ಮ ಸರಿಸಮಾನವಾದ ಸ್ಥಾನ ನೀಡಿ ಆ ಮೂಲಕ ಸಮಾಜದಲ್ಲಿ ಕ್ರಾಂತಿಯನ್ನುಂಟು ಮಾಡಿದರು’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಹೇಳಿದರು.
ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ‘ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ’ ವತಿಯಿಂದ ಮಂಗಳವಾರ ಆಯೋಜನೆ ಮಾಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಂದು ಕ್ಷೌರಿಕ ಸಮಾಜವನ್ನು ನೋಡುವ ರೀತಿಯೇ ಭಿನ್ನವಿತ್ತು. ಎಲ್ಲ ಶುಭ ಕಾರ್ಯಗಳಲ್ಲಿ, ಕೇಶ ಸೌಂದರ್ಯಕ್ಕೆ ಕ್ಷೌರಿಕರೇ ಬೇಕಿತ್ತು. ಆದರೆ ಇನ್ನುಳಿದ ಸಂದರ್ಭದಲ್ಲಿ ಮಡಿ–ಮೈಲಿಗೆ ಪರಿಕಲ್ಪನೆಯ ಧೋರಣೆ ತಾಳಲಾಗುತ್ತಿತ್ತು. ಇಂತಹ ಪಿಡುಗನ್ನು ನಿವಾರಿಸಲು ಹಾಗೂ ಕ್ಷೌರಿಕರು ನಮ್ಮಂತೆಯೇ ಎಂದು ತೋರಿಸಲು ಸಮಾಜದಲ್ಲಿನ 780 ಜಾತಿಗಳಲ್ಲಿ ಪ್ರಮುಖವಾದವರನ್ನು ಬಸವಣ್ಣನವರು ಗುರುತಿಸಿದ್ದರು. ಅದರಲ್ಲಿ ಹಡಪದ ಅಪ್ಪಣ್ಣ ಕೂಡ ಒಬ್ಬರಾಗಿದ್ದರು’ ಎಂದು ತಿಳಿಸಿದರು.
‘ಬಸವಣ್ಣನವರು ಕೇವಲ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಲಿಲ್ಲ. ಸಮಾಜದಲ್ಲಿ ಮಹಿಳೆಯರಿಗೂ ಸಮನಾದ ಅವಕಾಶ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ಸಿಗಬೇಕೆಂದು ಹೋರಾಟ ನಡೆಸಿದ್ದರು’ ಎಂದು ಹೇಳಿದರು.
‘ವೀರಪ್ಪ ಮೊಯ್ಲಿಯಂತಹವರು ರಾಜ್ಯದ ಮುಖ್ಯ ಮಂತ್ರಿ ಆಗಿದ್ದರೂ ಸಮಾಜದಲ್ಲಿ ಸವಿತಾ ಸಮಾಜದ ಬಗ್ಗೆ ಇರುವ ನಿಲುವು ಬದಲಾಗಿಲ್ಲ. ಇದು ಬದಲಾಗಬೇಕೆಂದರೆ ಸವಿತಾ ಸಮಾಜದವರಿಗೆ ರಾಜಕೀಯ ಕ್ಷೇತ್ರದಲ್ಲಿ ಮತ್ತು ಉನ್ನತ ಅಧಿಕಾರಗಳಲ್ಲಿ ಸ್ಥಾನ ಮತ್ತು ಅವಕಾಶ ಸಿಗಬೇಕು’ ಎಂದು ಒತ್ತಾಯಿಸಿದರು.
ತಾಲ್ಲೂಕು ಕಚೇರಿ ಶಿರಸ್ತೇದಾರ ರಘು, ರಾಜ್ಯ ಸರ್ಕಾರಿ ನೌಕರರ ಸಂಘಧ ತಾಲ್ಲೂಕು ಅಧ್ಯಕ್ಷ ನಂದೀಶ್, ವಚನ ಸಾಹಿತ್ಯ ಅಕಾಡೆಮಿಯ ಎಲ್ಲೇಗೌಡ ಬೆಸಗರಹಳ್ಳಿ, ರೇಷ್ಮೆ ಇಲಾಖೆಯ ಜೈಶಂಕರ್, ಅಳ್ಳಿಮಾರನಹಳ್ಳಿ ಪುಟ್ಟಸ್ವಾಮಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ ಇದ್ದರು.