ಕನಕಪುರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಾತನೂರಿನ ಋಣ ತೀರಿಸುವ ಕಾಲ ಕೂಡಿ ಬಂದಿದೆ. ಅವರು ಸಾತನೂರು ಅನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕೆಂದು ಸಾತನೂರು ತಾಲ್ಲೂಕು ರಚನಾ ಹೋರಾಟ ಸಮಿತಿ ಸದಸ್ಯರು ಒತ್ತಾಯಿಸಿದರು.
ಸಾತನೂರು ಮಹದೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ರೈತಸಂಘ ಮತ್ತು ಹೋರಾಟ ಸಮಿತಿಯಿಂದ ನಡೆದ ಸಭೆಯಲ್ಲಿ ಮಾತನಾಡಿದ ಪದಾಧಿಕಾರಿಗಳು, ‘ಚುನಾಣೆಗೂ ಮುನ್ನ ಶಿವಕುಮಾರ್ ಅವರು ಸಾತನೂರನ್ನು ಹೊಸ ತಾಲ್ಲೂಕ್ಕಾಗಿ ಮಾಡುವ ಭರವಸೆ ನೀಡಿದ್ದರು. ಅದರಂತೆ ಅವರ ಪಕ್ಷ ಈಗ ಅಧಿಕಾರಕ್ಕೆ ಬಂದಿದೆ. ಅವರು ಕೂಡ ಉಪ ಮುಖ್ಯಮಂತ್ರಿ ಆಗಿದ್ದಾರೆ. ಅವರಿಗೆ ತಾಲ್ಲೂಕು ರಚನೆ ಮಾಡಲು ಅವಕಾಶವಿದೆ’ ಎಂದು ಹೇಳಿದರು.
ಸಾತನೂರು ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯ ಜನ್ಮ ನೀಡಿದ ಪುಣ್ಯಭೂಮಿ. ಸಾತನೂರು ವಿಧಾನಸಭಾ ಕ್ಷೇತ್ರದ ಜನತೆ ಅವರನ್ನು ಐದು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ಕ್ಷೇತ್ರದ ಜನತೆಯ ಋಣ ಶಿವಕುಮಾರ್ ಅವರ ಮೇಲಿದೆ, ಆ ಋಣ ತೀರಿಸುವ ಅವಕಾಶ ಅವರಿಗೆ ಈಗ ಒದಗಿ ಬಂದಿದೆ ಎಂದು ಹೇಳಿದರು.
ತಾಲ್ಲೂಕನ್ನು ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಮಾಡಿರುವ ಶಿವಕುಮಾರ್ ಅವರು ಸಾತನೂರನ್ನು ಹೊಸ ತಾಲ್ಲೂಕ್ಕಾಗಿ ರಚನೆ ಮಾಡಬೇಕು. ಸಾತನೂರನ್ನು ಹೊಸ ತಾಲ್ಲೂಕ್ಕಾಗಿ ಮಾಡುವ ಮೂಲಕ ಇತಿಹಾಸದಲ್ಲಿ ಉಳಿಯುವಂತೆ ಮಾಡಬೇಕೆಂದು ಮನವಿ ಮಾಡಿದರು. ಮುಂಬರುವ ಬಜೆಟ್ನಲ್ಲಿ ತಾಲ್ಲೂಕು ಘೋಷಣೆ ಆಗಬೇಕೆಂದು ಒತ್ತಾಯಿಸಿದರು.
Cut-off box - ಅಭಿವೃದ್ಧಿಯಲ್ಲಿ ಕಡೆಗಣನೆ ಕನಕಪುರ ಕ್ಷೇತ್ರವಾಗಿ ಬದಲಾದ ಮೇಲೆ ಸಾತನೂರು ಕ್ಷೇತ್ರ ಕಡೆಗಣನೆಯಾಗಿದೆ. ಈ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿದೆ. ಇಲ್ಲಿ ಯಾವುದೆ ಆರ್ಥಿಕ ಪ್ರಗತಿಯ ಕಾರ್ಯಕ್ರಮಗಳಾಗಿಲ್ಲ ಇಲ್ಲಿ ಯಾವುದೆ ಕೈಗಾರಿಕೆಗಳಿಲ್ಲ ಅದಕ್ಕಾಗಿ ವಿರೂಪಾಕ್ಷಿಪುರ ಹೋಬಳಿ ಹಲಗೂರು ಹೋಬಳಿಯನ್ನು ಕೂಡಿಸಿಕೊಂಡು ಸಾತನೂರನ್ನು ಹೊಸ ತಾಲ್ಲೂಕ್ಕಾಗಿ ಘೋಷಣೆ ಮಾಡಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.