ಕನಕಪುರ: ದ್ಯಾಪೇಗೌಡನದೊಡ್ಡಿಯಲ್ಲಿ ಸೋಮವಾರ ರಾತ್ರಿ ದಾಳಿ ನಡೆಸಿರುವ ಕಾಡಾನೆಗಳು ಕಟಾವು ಮಾಡಿದ ಭತ್ತ ಮತ್ತು ಬಾಳೆ ಗಿಡಗಳನ್ನು ನಾಶಗೊಳಿಸಿವೆ.
ಗ್ರಾಮದ ಮೂಡ್ಲಿಗೌಡರ ಮಕ್ಕಳಾದ ಮಹದೇವ ಮತ್ತು ಮಹೇಶ್ ಅವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ಕಟಾವ್ ಮಾಡಿದ 25 ಕ್ವಿಂಟಲ್ ಭತ್ತ ನಾಶಗೊಳಿಸಿವೆ. ಗೊನೆ ಬಿಟ್ಟಿದ್ದ 50ಕ್ಕೂ ಹೆಚ್ಚು ಬಾಳೆ ಗಿಡಗಳು ನಾಶ ಮಾಡಿವೆ.
ಬಾಳೆ ಮತ್ತು ಭತ್ತ ನಾಶದಿಂದ ₹60 ಸಾವಿರ ನಷ್ಟವಾಗಿದೆ. ಪಕ್ಕದ ಸಾವಿತ್ರಮ್ಮ ಓದಯ್ಯ ಅವರಿಗೆ ಸೇರಿದ ಮುಕ್ಕಾಲು ಎಕರೆ ಜಮೀನಿನಲ್ಲಿ ಕಟಾವು ಮಾಡಿದ್ದ ಭತ್ತ ನಾಶವಾಗಿದೆ. ₹30 ಸಾವಿರ ನಷ್ಟವಾಗಿದೆ.
ತಾಲ್ಲೂಕಿನ ಅಳ್ಳಿಕೆರೆದೊಡ್ಡಿಯಲ್ಲಿ ಭಾನುವಾರ ಕಾಡಾನೆ ದಾಳಿಗೆ ರೈತ ತಿಮ್ಮಪ್ಪ ದಾರುಣವಾಗಿ ಸಾವನಪ್ಪಿದ್ದರು. ಅಲ್ಲಿ ದಾಳಿ ನಡೆಸಿದ ಕಾಡಾನೆಗಳು ವಾಪಸ್ ಹೋಗದೆ ಅಳ್ಳಿಕೆರೆದೊಡ್ಡಿ ಸುತ್ತಮುತ್ತಲ ಪ್ರದೇಶದಲ್ಲೇ ಸಂಚರಿಸುತ್ತಿವೆ.
ಎಂಟತ್ತು ಆನೆಗಳು ಹಿಂಡಾಗಿ ಕೆರಳಾಳುಸಂದ್ರ, ಬೆಟ್ಟಳ್ಳಿ, ಶ್ರೀನಿವಾಸನಹಳ್ಳಿ, ಗೌಡಳ್ಳಿ, ದ್ಯಾಪೇಗೌಡನದೊಡ್ಡಿ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ನಡೆಸುತ್ತಿವೆ ಎಂದು ರೈತರು ಅತಂಕ ವ್ಯಕ್ತಪಡಿಸಿದರು.
ರೈತರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಗಸ್ತು ಅರಣ್ಯ ಪಾಲಕರಾದ ಮಾದಪ್ಪ ಮತ್ತು ಮಂಜು ಪರಿಶೀಲನೆ ನಡೆಸಿದರು.