ಬಿಡದಿ: ಮಹಿಳೆ ಸಮಾಜದ ಅವಿಭಾಜ್ಯ ಅಂಗ. ಮಹಿಳೆಯಿಲ್ಲದೆ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಹೇಳಿದರು.
ಇಲ್ಲಿನ ಜ್ಞಾನ ವಿಕಾಸ ವಿದ್ಯಾಸಂಸ್ಥೆ ಹಾಗೂ ಜ್ಞಾನ ವಿಕಾಸ ಇನ್ ಸ್ಟಿಟ್ಯೂಟ್ ಆಫ್ ಮೆನೇಜ್ ಮೆಂಟ್ ಸ್ಟಡೀಸ್ ಅಂಡ್ ಕಾಮರ್ಸ್ ಗಳ ಸಹಯೋಗದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯು ಸಮಾಜದ ಎಲ್ಲಾ ಸ್ತರಗಳಲ್ಲಿ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲಳು ಎಂಬುದನ್ನು ಸಾಬೀತು ಪಡಿಸಿದ್ದಾಳೆ. ಮದರ್ ತೆರೆಸಾ, ಮೇಡಂ ಕ್ಯೂರಿ, ಕಲ್ಪನಾ ಚಾವ್ಲ, ಇಂದಿರಾಗಾಂಧಿ ಇವರೆಲ್ಲರೂ ಮಹಿಳೆಯರೇ ಆಗಿದ್ದು ತಮ್ಮ ಕಾರ್ಯಕ್ಷೇತ್ರಗಳಲ್ಲಿ ವಿಶ್ವ ಪ್ರಸಿದ್ದಿಯನ್ನು ಗಳಿಸಿದ್ದಾರೆ ಎಂದು ತಿಳಿಸಿದರು.
ಮಹಿಳೆಯರಾದ ನಾವುಗಳು ನಮ್ಮಲ್ಲೇ ಕೀಳರಿಮೆಯ ಭಾವನೆಯನ್ನು ಬೆಳೆಸಿಕೊಳ್ಳುವ ಬದಲು ಮಹಿಳೆ ಒಂದು ಹೆಣ್ಣಾಗಿ ತಾನು ಹೊಂದಿರುವ ವಿಶೇಷತೆಗಳ ಬಗ್ಗೆ ಹೆಮ್ಮ ಹೊಂದಿರಬೇಕು. ತಾಯ್ತನ ಹೊಂದುವುದು, ಮಗುವಿಗೆ ಜನ್ಮ ನೀಡುವುದು, ಮಹಿಳೆಯಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿ, ‘ಮನುಷ್ಯ ಮೊದಲು ನಾನು ಯಾರು ಎಂಬ ಪ್ರಶ್ನೆ ಹಾಕಿಕೊಂಡರೆ, ನಾನು ಹೆಣ್ಣಿಂದ ಜನ್ಮ ಪಡೆದವನು ಎಂಬ ಉತ್ತರ ಸಿಗುತ್ತದೆ. ಹೆಣ್ಣು ಸಂಸಾರಕ್ಕೆ ಒಂದು ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಅನಿವಾರ್ಯ ಮತ್ತು ಅವಶ್ಯಕ. ಮಹಿಳೆಯಿಲ್ಲದ ಮನೆ ಸಮಾನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಮಹಿಳೆ ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸುತ್ತಾ ಬಂದಿದ್ದಾಳೆ’ ಎಂದು ತಿಳಿಸಿದರು.
ಸಾಹಿತಿ ಡಾ.ಎಂ. ಬೈರೇಗೌಡ, ಜ್ಞಾನ ವಿಕಾಸ ವಿದ್ಯಾಸಂಸ್ಥೆ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಆರ್ ನಾಗರಾಜು, ಖಜಾಂಚಿ ಬಿ.ಟಿ ಹೊನ್ನಶೆಟ್ಟಿ, ನಿರ್ದೇಶಕರಾದ ಎಸ್, ರಾಮಶಿವಣ್ಣ, ಬಿ.ಎನ್ ಗಂಗಾಧರಯ್ಯ, ಎಲ್. ಸತೀಶ ಚಂದ್ರ, ಪ್ರಾಚಾರ್ಯ ಡಾ. ಎ.ರಾಮ್ ಪ್ರಸಾದ್, ಟಿ ರೂಪ, ಮುಖ್ಯ ಶಿಕ್ಷಕಿ ಎ.ಡಿ ಪಾರ್ವತಿ ಇದ್ದರು.