ಚನ್ನಪಟ್ಟಣ: `ಗುಣಮಟ್ಟದ ಹಾಲು ಪೂರೈಕೆ ಮಾಡುವ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಗುಜರಾತ್ ಪ್ರವಾಸಕ್ಕೆ ಕಳುಹಿಸಲು ಒಕ್ಕೂಟ ಸಿದ್ಧತೆ ನಡೆಸಿದೆ~ ಎಂದು ಬಮೂಲ್ ನಿರ್ದೇಶಕ ಎಸ್. ಲಿಂಗೇಶ್ಕುಮಾರ್ ತಿಳಿಸಿದರು.
ತಾಲ್ಲೂಕಿನ ಕೋಲೂರು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸದಸ್ಯರಿಗೆ ಬೆಂಗಳೂರು ಒಕ್ಕೂಟ, ಹಾಸನ ಒಕ್ಕೂಟ, ದಕ್ಷಿಣ ಕನ್ನಡ ಒಕ್ಕೂಟಗಳ ಅಧ್ಯಯನ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು. ಶುದ್ಧ ಹಾಲು ಉತ್ಪಾದನೆಗೆ ಪಣತೊಟ್ಟಿರುವ ಬಮುಲ್ ತನ್ನ ಉತ್ಪಾದಕರಿಗೆ ಹಲವಾರು ಪ್ರೋತ್ಸಾಹ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.
ಶುದ್ಧ ಹಾಲು ಪೂರೈಕೆ ಮಾಡಿದ ಸಂಘಗಳಿಗೆ ಪ್ರವಾಸ ಯೋಜನೆ ಜಾರಿಗೆ ತರಲಾಗಿದೆ. ಒಕ್ಕೂಟದ ಖರ್ಚಿನಲ್ಲಿ ಪ್ರವಾಸಕ್ಕೆ ಕಳುಹಿಸಲಾಗುವುದು. ವಿವಿಧ ಹಾಲು ಉತ್ಪಾದಕರ ಒಕ್ಕೂಟಗಳಿಗೆ ಭೇಟಿ ನೀಡಿ ವೈಜ್ಞಾನಿಕವಾಗಿ ಉತ್ತಮ ಗುಣಮಟ್ಟದ ಹಾಲು ಪೂರೈಕೆಯ ಬಗ್ಗೆ ಅರಿತು ಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಶಿಬಿರ ಉಪ ವ್ಯವಸ್ಥಾಪಕ ಎಚ್.ಪಿ. ಮುನಿರಾಜು, ಡಾ. ಶ್ರೀಧರ್, ವಿಸ್ತರಣಾಧಿಕಾರಿಗಳಾದ ಬಿ.ಎ. ಶಿವಪ್ರಸನ್ನ, ಮಹದೇವೇಗೌಡ, ಎಚ್. ಶ್ರೀನಿವಾಸ್, ಕೋಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಆಡಳಿತ ಮಂಡಲಿ ನಿರ್ದೇಶಕರು ಉಪಸ್ಥಿತರಿದ್ದರು.