ಕನಕಪುರ: ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಮತ್ತು ರಾಗಿ ಮೆದೆಗಳು ಸುಟ್ಟು ಭಸ್ಮವಾಗಿ ಲಕ್ಷಾಂತರ ರೂ ನಷ್ಟವಾಗಿರುವಂತ ಘಟನೆ ತಾಲ್ಲೂಕಿನ ದೊಡ್ಡ ಆಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳಂದ ಗ್ರಾಮದ ಸೋಮವಾರ ನಡೆದಿದೆ.
ಏಕಾಎಕಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ 8 ಗುಡಿಸಲು, 2 ರಾಗಿಮೆದೆಗಳನ್ನು ನಾಶ ಮಾಡಿದೆ. ಒಕ್ಕಣೆ ಮಾಡಿದ ಧವಸದಾನ್ಯ, ಬಟ್ಟೆ, ಸೈಕಲ್ ಸಂಪೂರ್ಣವಾಗಿ ಭಸ್ಮವಾಗಿವೆ.
ಗ್ರಾಮದ ಹೊರವಲಯದಲ್ಲಿ ದೊಡ್ಡ ಮಾದೇಗೌಡ, ಮಾದೇಶ, ಉಮೇಶ್, ಸವಿತಾ, ಲಕ್ಷ್ಮಣ ಮತ್ತು ಕುಮಾರ್ ಗುಡಿಸಲು ಹಾಕಿಕೊಂಡು ಕುಟುಂಬದವರ ಜೊತೆ ಜೀವನ ನಡೆಸುತ್ತಿದ್ದರು.
ಯಾವುದೇ ಪ್ರಾಣಾಪಯವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಸಾತನೂರು ಪೋಲಿಸರು ಪ್ರಕರಣ ದಾಖಲಿಸಲಾಗಿದೆ.
ಭೇಟಿ: ಶಾಸಕ ಡಿ.ಕೆ.ಶಿವಕುಮಾರ್ ಬೆಂಕಿ ಆಕಸ್ಮಿಕ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ್ದರು. ಗುಡಿಸಲುವಾಸಿಗಳಿಗೆ ಶೀಘ್ರ ಪರಿಹಾರ ಕೊಡಿಸಲಾಗುವುದು. ವೈಯಕ್ತಿವಾಗಿ ತಲಾ ಮೂರು ಸಾವಿರ ರೂಗಳನ್ನು ನೀಡಲಾಗುವುದು ಎಂದರು.
ಸಾಗುವಳಿ ಪತ್ರದ ಭರವಸೆ:ಅರಣ್ಯ ವ್ಯಾಪ್ತಿಯ ಪ್ರದೇಶದ್ಲ್ಲಲಿ ಜಮೀನು ಸಾಗುವಳಿ ಮಾಡುತ್ತಿರುವ ಸಾಗುವಳಿದಾರರಿಗೆ ಸಾಗುವಳಿ ಪತ್ರವನ್ನು ಕೊಡಿಸಿಕೊಡುವುದಾಗಿ ಶಿವಕುಮಾರ್ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಈ ಬಗ್ಗೆ ಈಗಾಗಲೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆೀನೆ. 25-30 ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಮತ್ತು ಹಕ್ಕುಪತ್ರ ನೀಡಬೇಕೆಂದು ಒತ್ತಾಯಪಡಿಸಿದ್ದೆೀನೆ. ಅದರಂತೆ ಮುಂದೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಕ್ಕು ಪತ್ರ ಕೊಡಿಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಾದೇವಿ, ತಾಲ್ಲೂಕು ಪಂಚಾಯತಿ ಸದಸ್ಯ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ವಿಜಯದೇವು, ಏಳಗಳ್ಳಿ ರವಿ, ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್, ಚಂದ್ರಾಜ್, ಸದಾಶಿವ, ಗಿರೀಶ್ ಬಾಬು, ತಹಸೀಲ್ದಾರ್ ಎಚ್. ಜಿ. ಚಂದ್ರಶೇಖರಯ್ಯ ಹಾಜರಿದ್ದರು.