ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮಕ್ಕೆ ಹೊಂದಿಕೊಂಡಿರುವ ತೆಂಗಿನಕಲ್ಲು ಅರಣ್ಯ ಪ್ರದೇಶದ ಸೇತುವೆಯ ಕೆಳಗಡೆ ಹತ್ಯೆಗೊಳಗಾಗಿರುವ ಯುವಕನೊಬ್ಬನ ಸುಟ್ಟ ದೇಹ ಶನಿವಾರ ಕಂಡು ಬಂದಿದೆ. ಕೊಲೆಯಾದ ವ್ಯಕ್ತಿಯ ಮೇಲೆ ಪೆಟ್ರೋಲ್ ಸುರಿದು ದೇಹವನ್ನು ಸುಟ್ಟು ಹಾಕಿ, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಹುಷಃ ಶುಕ್ರವಾರ ಮಧ್ಯರಾತ್ರಿ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಹತ್ಯೆ ಮಾಡಿದ ಸಂದರ್ಭದಲ್ಲಿ ಆತನ ಮೋಟಾರ್ ಬೈಕ್ (ಸಿಡಿ-100) ರಸ್ತೆಯಿಂದ ಸೇತುವೆಯ ಕೆಳಗೆ ತಳ್ಳಿ ಆ ಮೋಟಾರ್ ಬೈಕಿಗೂ ಬೆಂಕಿ ಹಾಕಿ ಸುಟ್ಟುಹಾಕಲಾಗಿದೆ. ಆ ಬೈಕಿನ ಪೆಟ್ರೋಲ್ ಬಳಸಿಯೇ ವ್ಯಕ್ತಿಯನ್ನೂ ಸುಟ್ಟು ಹಾಕಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ವ್ಯಕ್ತಿ ಮುಸ್ಲಿಂ ಜನಾಂಗದವರಿರಬಹುದು. ಆತ ಮೆಕಾನಿಕ್ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಮಾರ್ಗ ಅರಣ್ಯ ಪ್ರದೇಶಶದಿಂದ ಸುತ್ತುವರೆದಿದ್ದು, ನಿರ್ಜನ ಪ್ರದೇಶವಾಗಿದೆ. ಇಂತಹ ಹಲವು ಘಟನೆಗಳು ಈ ಭಾಗದಲ್ಲಿ ನಡೆದಿವೆ ಎಂದು ಗ್ರಾಮದ ಜನತೆ ಹೇಳುತ್ತಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಕ್ಕೂರು ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಪಹರಣ: ಹಣ ದರೋಡೆ
ಮಾಗಡಿ: ತಾಲ್ಲೂಕಿನ ಕುದೂರು, ಹುಲಿಕಲ್ ನಡುವಿನ ಸರಾನ ಪೆಟ್ರೋಲ್ ಬಂಕ್ ಮಾಲೀಕ ವೈಕುಂಠ ವರಪ್ರಸಾದ್ ಅವರನ್ನು ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಅಪಹರಿಸಿ, ಅವರಿಂದ ಹಣ ದೋಚಿದ್ದಾರೆ.
ಟಾಟಾ ಸುಮೊದಲ್ಲಿ ಬಂದ ದುಷ್ಕರ್ಮಿಗಳು ಬಂಕ್ನಲ್ಲಿದ್ದ ವರಪ್ರಸಾದ್ ಅವರನ್ನು ಅಪಹರಿಸಿ, ರಾಷ್ಟ್ರೀಯ ಹೆದ್ದಾರಿ 48ರ ಕುಣಿಗಲ್ ಕಡೆ ಕರೆದೊಯ್ದು, 5 ಸಾವಿರ ರೂಪಾಯಿಯನ್ನ ಕಿತ್ತುಕೊಂಡು ಕೆಳಗಿಳಿಸಿ ಪರಾರಿಯಾಗಿದ್ದಾರೆ. ಅಪಹರಣಕಾರರ ಗುರುತು ಪತ್ತೆಯಾಗಿಲ್ಲ. ಕುದೂರು ಪೊಲೀಸರು ಪ್ರಕರಣ ದಾಖಲಿಕೊಂಡಿದ್ದಾರೆ.