ಮಾಗಡಿ: ನೈತಿಕತೆ ಪರಂಪರೆ ಬಿತ್ತುವ ಭಜನೆ, ಹರಿಕಥೆಯಂತಹ ಸಾಂಸ್ಕೃತಿಕ ಚಟುವಟಿಕೆ ಪುನರ್ ಪ್ರಾರಂಭಿಸುವ ಅಗತ್ಯವಿದೆ ಎಂದು ಗ್ರಾಮೀಣ ಮೂಲ ಸೌಕರ್ಯಗಳ ಇಲಾಖೆ ನಿರ್ದೇಶಕ ಎನ್.ಕೃಷ್ಣಪ್ಪ ಕೋಡಿಪಾಳ್ಯ ಅಭಿಪ್ರಾಯಪಟ್ಟರು.
ಮಣ್ಣಿಗನಹಳ್ಳಿ ಚೌಡೇಶ್ವರಿ ದೇಗುಲದ ಆವರಣದಲ್ಲಿ ಶನಿವಾರ ರಾತ್ರಿ ಇಸ್ಕಾನ್ ಕೃಷ್ಣ ಪ್ರಜ್ಞೆ ಸಂಘದ ಸಹಯೋಗದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಸ್ಕಾನ್ ಸಂಸ್ಥೆ ಪ್ರತಿನಿಧಿ ಆದಿ ಕೃಷ್ಣದಾಸ ಮಾತನಾಡಿ, ಕೃಷ್ಣ ಪ್ರಜ್ಞೆ ಎಲ್ಲರಲ್ಲಿಯೂ ಇದೆ. ದುಷ್ಚಟಗಳಿಂದ ದೂರ ಉಳಿಯಲು ಭಜನೆ ಮಾಡುವುದು, ಧಾರ್ಮಿಕ ಗ್ರಂಥಗಳ ಪಠನ ಮಾಡುವುದು ನಿತ್ಯ ನಡೆಯಬೇಕು ಎಂದರು.
ನಿವೃತ್ತ ಮುಖ್ಯಶಿಕ್ಷಕ ಎಂ.ಜಿ.ನರಸಿಂಹಯ್ಯ, ಹಿರಿಯ ರಂಗಕಲಾವಿದ ನಾಗಾಚಾರ್, ನಿವೃತ್ತ ಪೊಲೀಸರು ಅಧಿಕಾರಿ ಎಂ.ಜಿ.ಜವರೇಗೌಡ, ನಿವೃತ್ತ ಎಂಜಿನಿಯರ್ ಎಂ.ಮಾದೇಗೌಡ, ಶಿಕ್ಷಕಿ ಅನುಸೂಯಮ್ಮ, ಇಸ್ಕಾನ್ ಪ್ರತಿನಿಧಿ ಚೈತ್ಯಗುರು ಗೌರದಾಸ, ಸತ್ಸಂಗದಲ್ಲಿ ಮಾತನಾಡಿದರು.
ರಂಗಭೂಮಿ ಕಲಾವಿದ ಎಂ.ಜಿ.ಗೋಪಾಲಕೃಷ್ಣ ಹಾಡುಗಾರಿಕೆ ನಡೆಸಿಕೊಟ್ಟರು. ಮುಖಂಡರಾದ ಹರ್ಷಿತಾ, ಉಮಾ, ಪ್ರಸನ್ನ, ಪದ್ಮ, ತಾಯಮ್ಮ, ರಶ್ಮಿ, ದೊಡ್ಡಮ್ಮ, ಮತ್ತು ಗ್ರಾಮಸ್ಥರು ಇದ್ದರು.