ಶಿವಮೊಗ್ಗ: ‘ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿರುವ ಕುಡಚಿ ಕ್ಷೇತ್ರದ ಮಾಜಿ ಶಾಸಕ ಪಿ.ರಾಜೀವ್ ಅವರು ಕ್ಷಮೆ ಕೇಳಬೇಕು’ ಎಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮಕ್ಬುಲ್ ಅಹಮ್ಮದ್ ಆಗ್ರಹಿಸಿದ್ದಾರೆ.
‘ರಾಜೀವ್ ಅವರಿಗೆ ಪರಮೇಶ್ವರ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಪರಮೇಶ್ವರ ಅವರು ಸಮರ್ಥ ಗೃಹ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಂತಹವರ ಬಗ್ಗೆ ಅಹವೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಈಗಾಗಲೇ ರಾಜೀವ್ ಅವರಿಗೆ ಕುಡಚಿ ಕ್ಷೇತ್ರದ ಜನ ಸರಿಯಾದ ಪಾಠ ಕಲಿಸಿದ್ದಾರೆ. ಅದನ್ನು ಅವರು ಮರೆತಂತೆ ಕಾಣುತ್ತದೆ. ಬಿಜೆಪಿ ನಾಯಕರನ್ನು ಮೆಚ್ಚಿಸಲು ಇಂತಹ ಹೇಳಿಕೆ ನೀಡಿದ್ದಾರೆ. ಆದ್ದರಿಂದ ರಾಜೀವ್ ಕೂಡಲೇ ಗೃಹಮಂತ್ರಿ ಮತ್ತು ರಾಜ್ಯದ ಜನತೆಯ ಬಳಿ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.
ವೇದಿಕೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಚ್.ಎನ್.ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ, ಖಲಂದರ್, ಹಬೀಬುಲ್ಲಾ, ರಾಮಕೃಷ್ಣ, ಅನ್ವರ್ ಪಾಶಾ, ಸೈಯದ್ ಜಮೀರ್, ಇಮ್ತಿಯಾಜ್ ಇದ್ದರು.