ಆನವಟ್ಟಿ ಸಮೀಪದ ಕುಬಟೂರಿನ ದೊಡ್ಡ ಕೆರೆ, ಆನವಟ್ಟಿಯ ತಾವರೆ ಕೆರೆಗಳ ಏರಿಯ ಮೇಲೆ ವ್ಯಾಪಾರಿಗಳು ಕೋಳಿ ಮತ್ತು ಮೀನಿನ ತ್ಯಾಜ್ಯವನ್ನು ಚೀಲದಲ್ಲಿ ಕಟ್ಟಿ ಎಸೆದು ಹೋಗುತ್ತಿದ್ದು, ದುರ್ನಾಥ ಬೀರುತ್ತಿದೆ.
ಇಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳ ಸಂಚಾರವಿದೆ. ಆನವಟ್ಟಿ, ಕುಬಟೂರು, ಕೋಟಿಪುರದ ಗ್ರಾಮಸ್ಥರು ವಾಯು ವಿಹಾರಕ್ಕಾಗಿ ಇಲ್ಲಿಗೆ ಬರುತ್ತಾರೆ. ಆದರೆ ಕೆಟ್ಟ ವಾಸನೆಯಿಂದ ಮೂಗು ಹಿಡಿದುಕೊಂದೇ ಹೋಗಬೇಕಾಗಿದೆ. ಕೆಲವರು ವಾಯು ವಿಹಾರಕ್ಕೆ ಹೋಗುವುದನ್ನೇ ನಿಲ್ಲಿಸಿದ್ದಾರೆ.
ವರ್ಷದ ಹಿಂದೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ಬಳಿಕ ಆಗಿನ ಪಿಡಿಒ ರವಿಕುಮಾರ್ ಅವರು ತಾವೇ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಕಸ ಹಾಕಿದರೆ ದಂಡ ವಿಧಿಸುವ ನಾಮಫಲಕಗಳನ್ನು ಹಾಕಲಾಗಿತ್ತು. ಆದರೆ ಮತ್ತೆ ವ್ಯಾಪಾರಿಗಳು ತ್ಯಾಜ್ಯ ಸುರಿಯುವುದನ್ನು ಮುಂದುವರಿಸಿದ್ದಾರೆ. ತ್ಯಾಜ್ಯ ಸುರಿಯುವ ಕಾರಣ, ಈ ಜಾಗದಲ್ಲಿ ನಾಯಿಗಳ ಕಾಟವೂ ಹೆಚ್ಚಾಗಿದೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿಯವರು ಗಮನ ಹರಿಸಿ, ತ್ಯಾಜ್ಯ ಸುರಿಯುವುದನ್ನು ನಿಯಂತ್ರಿಸಿ, ಕೆರೆಗಳ ಸಂರಕ್ಷಣೆಗೆ ಮುಂದಾಗಬೇಕು