ಭದ್ರಾವತಿ: ‘ನರೇಂದ್ರ ಮೋದಿ ಅವರು 10 ವರ್ಷಗಳಿಂದ ನಿರಂತರವಾಗಿ ಶ್ರಮಪಟ್ಟು ದೇಶದ ಜನತೆಗೋಸ್ಕರ ಕೆಲಸ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಮತ ನೀಡಿ ಕೂಲಿ ನೀಡುವ ಸಂದರ್ಭ ಬಂದಿದೆ’ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ತಿಳಿಸಿದರು.
ಅವರು ಹಳೇ ನಗರದ ಕನಕ ಮಂಟಪದಲ್ಲಿ ಬುಧವಾರ ಬಿಜೆಪಿ ಪರವಾಗಿ ಮತ ಪ್ರಚಾರದ ಬೃಹತ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ತಮಿಳಿನಲ್ಲಿ ಹೆಚ್ಚಾಗಿ ಮಾತನಾಡಿದ ಅವರು ದೇಶದ ಪ್ರಧಾನಿಯಾಗಿ ಬರಲು ಒಂದು ತಾಕತ್ತು ಬೇಕು. ಅದು ಕೇವಲ ನರೇಂದ್ರ ಮೋದಿ ಅವರಿಗೆ ಮಾತ್ರ ಇದೆ ಎಂದರು.
‘ಕಾಂಗ್ರೆಸ್ ಪಕ್ಷದಲ್ಲಿ ಕಳೆದ 8 ತಿಂಗಳಿಂದಲೂ ಪ್ರಧಾನ ಮಂತ್ರಿ ಆಗುವ ಅಭ್ಯರ್ಥಿಯನ್ನು ಹುಡುಕುತ್ತಿದ್ದಾರೆ. ಇನ್ನೂ ನಿಗದಿಯಾಗಿಲ್ಲ ಮುಂದೆಯೂ ನಿಗದಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಪ್ರಧಾನಮಂತ್ರಿಯಾಗಲು ಅವರ ಪಕ್ಷದಲ್ಲಿ ಎಲ್ಲರಿಗೂ ಆಸೆ ಇದೆ. ಅವರಲ್ಲಿಯೇ ಒಗ್ಗಟ್ಟಿಲ್ಲ’ ಎಂದರು.
ಬಿಜೆಪಿ ಅಭ್ಯರ್ಥಿ ಬಿ.ಎಸ್.ರಾಘವೇಂದ್ರ ಮಾತನಾಡಿ, ತಮಿಳಿನಲ್ಲಿಯೇ ಮತ ಬೇಡಿದರು. ‘ಚುನಾವಣೆಯಲ್ಲಿ ಗೆದ್ದ ತಕ್ಷಣವೇ ಮೊದಲ ಗುರಿ ವಿ.ಐ.ಎಸ್.ಎಲ್ಗೆ ಶಾಶ್ವತ ಜೀವ ನೀಡುವುದು, ಎಂ.ಪಿ.ಎಂ ಕಾರ್ಖಾನೆ ಪುನರಾರಂಭಿಸಲಾಗುವುದು ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕರುಣಾಮೂರ್ತಿ ಮಾತನಾಡಿ, ತಮಿಳು ಸಂಘವು ಸಂಪೂರ್ಣವಾಗಿ ಬಿಜೆಪಿಗೆ ಮತ ನೀಡಲಿದ್ದು, ರಾಘವೇಂದ್ರ ಅವರಿಗೆ ಸಂಪೂರ್ಣ ಬೆಂಬಲ ನೀಡಿ ಒಂದು ಲಕ್ಷಕ್ಕೂ ಹೆಚ್ಚು ಮತದ ಅಂತರದಿಂದ ಗೆಲ್ಲಿಸುವುದಾಗಿ ಆಶ್ವಾಸನೆ ನೀಡಿದರು.
ಬಿಜೆಪಿ, ಜೆಡಿಎಸ್ ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು ಮುಖಂಡರು, ತಮಿಳು ಸಂಘದ ಪದಾಧಿಕಾರಿಗಳು, ವೇದಿಕೆ ಮೇಲೆ ಉಪಸ್ಥಿತರಿದ್ದರು. ಧರ್ಮಪ್ರಸಾದ್, ಮಂಜುನಾಥ್ ಕದಿರೇಶ್, ಚೈತ್ರಾ ಸಜ್ಜನ್ ಇದ್ದರು.